ಮಧುಗಿರಿ: ‘ಪಿಡಿಒ ರವಿಚಂದ್ರ ಅವರ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದುಗಂಜಲಗುಂಟೆ ಗ್ರಾ.ಪಂ. ಅಧ್ಯಕ್ಷೆ ಸಾವಿತ್ರಮ್ಮ ಡಿ.ಎಚ್. ನಾಗರಾಜು ತಿಳಿಸಿದರು.
ತಾಲ್ಲೂಕಿನ ಗಂಜಲಗುಂಟೆ ಗ್ರಾ.ಪಂ.ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಪಿಡಿಒ ರವಿಚಂದ್ರ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಹಾಗಾಗಿ, ಪಿಡಿಒ ನನ್ನ ವಿರುದ್ಧ ಕೆಲವು ಸದಸ್ಯರನ್ನು ಎತ್ತಿಕಟ್ಟಿ ರಾಜಕೀಯ ನಡೆಸಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸಿದರು. ನನ್ನ ತೇಜೋವಧೆಗೂ ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.
ಗ್ರಾ.ಪಂ. ಸದಸ್ಯ ವೀರೇಶ್ ಮಾತನಾಡಿ, ‘ನಾನು ಎಂಜಿನಿಯರಿಂಗ್ ಪದವೀಧರ. ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಸದಸ್ಯನಾಗಿ ಆಯ್ಕೆಯಾಗಿದ್ದಾನೆ. ಆದರೆ, ನಾವು ನಿರೀಕ್ಷಿಸಿದ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪಿಡಿಒ ಅವರೇ ಕಾರಣ’ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಚೇತನ ಶಿವಕುಮಾರ್, ಸದಸ್ಯರಾದ ದಾಸೇಗೌಡ, ಮಹೇಶ್, ನಂದಿನಿ ರಘುನಾಥ್, ಸಿ. ಮಾಲಾ, ನಾಗಭೂಷಣ, ರಂಗರಾಜು ಹಾಜರಿದ್ದರು.
ಮೊಬೈಲ್ ಕರೆ ಸ್ವೀಕರಿಸಲಿಲ್ಲ: ಅಧ್ಯಕ್ಷೆ ಮತ್ತು ಸದಸ್ಯರ ಆರೋಪದ ಬಗ್ಗೆ ಸ್ಪಷ್ಟನೆ ಪಡೆಯಲು ಸಾಕಷ್ಟು ಬಾರಿ ಮೊಬೈಲ್ ಕರೆ ಮೂಲಕ ಪ್ರಯತ್ನಿಸಿದರೂ ಪಿಡಿಒ ಅವರು ಕರೆ ಸ್ವೀಕರಿಸಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.