ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಪಿಂಚಣಿ ಪರಿಷ್ಕರಣೆ ಹಾಗೂ ತುಟ್ಟಿಭತ್ಯೆ ನೀಡಬೇಕೆಂದು ತಾಲ್ಲೂಕು ನಿವೃತ್ತ ನೌಕರರ ಸಂಘ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸೋಮವಾರ ತಾಲ್ಲೂಕು ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು, ಸದಸ್ಯರು ತಾಲ್ಲೂಕು ಕಚೇರಿಗೆ ತೆರಳಿ ಮನವಿ ನೀಡಿದರು.
ಸಂಘದ ಅಧ್ಯಕ್ಷ ಮಾರಸಂದ್ರ ಈಶ್ವರಪ್ಪ ಮಾತನಾಡಿ, ಕೇಂದ್ರ ಸರ್ಕಾರ 8ನೇ ವೇತನ ಆಯೋಗದಲ್ಲಿ ಪಿಂಚಣಿ ಪರಿಷ್ಕರಣೆಯಲ್ಲಿ ಯಾವುದೇ ವೇತನ ನೀಡುವುದಿಲ್ಲ. ಇದರಿಂದ ರಾಷ್ಟ್ರದಲ್ಲಿರುವ ಲಕ್ಷಾಂತರ ಮಂದಿಗೆ ಅನ್ಯಾಯವಾಗುತ್ತಿದೆ. ತಾಲ್ಲೂಕಿನಲ್ಲಿ 1000ಕ್ಕೂ ಹೆಚ್ಚು ನಿವೃತ್ತರ ಪರವಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದು, ಪ್ರಧಾನಮಂತ್ರಿ ಮತ್ತು ಹಣಕಾಸು ಸಚಿವೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ನಿರ್ದೇಶಕಿ ಎನ್.ಇಂದಿರಮ್ಮ ಮಾತನಾಡಿ, ಕೇಂದ್ರ ಸರ್ಕಾರ ತೆಗೆದುಕೊಂಡಿರುವ ತೀರ್ಮಾನದಿಂದ ನಿವೃತ್ತ ನೌಕರರಿಗೆ ನೀಡುತ್ತಿರುವ ಭತ್ಯೆಗಳಿಗೆ ಸೀಮಿತವಾಗಿರಲಿ ಎನ್ನಲಾಗಿದೆ. ಪ್ರತಿದಿನ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಭವಿಷ್ಯದಲ್ಲಿ ನಿವೃತ್ತರು ಹಣಕಾಸಿನ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ನಮ್ಮ ಬೇಡಿಕೆ ಈಡೇರದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿವೃತ್ತ ತಹಶೀಲ್ದಾರ್ ಲಕ್ಷ್ಮಣ್ ಮಾತನಾಡಿ, 2026ರಿಂದ ವೇತನ ಪರಿಷ್ಕರಣೆ ಮಾಡಬಾರದು ಎನ್ನುವ ಶಾಸನವನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಇಲ್ಲವಾದರೆ ನಿವೃತ್ತ ನೌಕರರಿಗೆ ಮರಣಶಾಸನವಾಗುತ್ತದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ನಂದೀಶ್ ಬಟ್ಲೇರಿ, ಖಜಾಂಚಿ ಎಸ್.ಆರ್.ಶಾಂತಯ್ಯ, ಸದಸ್ಯ ನಾಗರಾಜು ಹುಲಗಯ್ಯ, ಬಿ.ನಾಗರಾಜು, ಉಮಾದೇವಿ, ಶಾಂತಮ್ಮ, ರಾಜಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.