ADVERTISEMENT

ಖಾಲಿ ಬಿಂದಿಗೆ ಪ್ರದರ್ಶಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 3:13 IST
Last Updated 30 ಸೆಪ್ಟೆಂಬರ್ 2021, 3:13 IST
ಕುಣಿಗಲ್ ತಾಲ್ಲೂಕಿನ ಬೇಗೂರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಬುಧವಾರ ಹುಚ್ಚಲಕ್ಕಯ್ಯನ ಪಾಳ್ಯದ ಗ್ರಾಮಸ್ಥರು ಅಸಮರ್ಪಕ ಕುಡಿಯುವ ನೀರು ಪೂರೈಕೆ ಖಂಡಿಸಿ ಪ್ರತಿಭಟನೆ ನಡೆಸಿದರು
ಕುಣಿಗಲ್ ತಾಲ್ಲೂಕಿನ ಬೇಗೂರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಬುಧವಾರ ಹುಚ್ಚಲಕ್ಕಯ್ಯನ ಪಾಳ್ಯದ ಗ್ರಾಮಸ್ಥರು ಅಸಮರ್ಪಕ ಕುಡಿಯುವ ನೀರು ಪೂರೈಕೆ ಖಂಡಿಸಿ ಪ್ರತಿಭಟನೆ ನಡೆಸಿದರು   

ಕುಣಿಗಲ್: ಅಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಖಂಡಿಸಿ ತಾಲ್ಲೂಕಿನ ಹುಚ್ಚಲಕ್ಕಯ್ಯನಪಾಳ್ಯ ಗ್ರಾಮಸ್ಥರು ಬೇಗೂರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಮುಖಂಡ ಜೈರಾಮು, ಹುಚ್ಚಲಕ್ಕಯ್ಯನಪಾಳ್ಯದಲ್ಲಿ 45 ಮನೆಗಳಿವೆ. 15ನೇ ಹಣಕಾಸು ಯೋಜನೆಯಡಿ ಗ್ರಾಮ ಪಾಪೆಗೌಡರ ಮನೆ ಮುಂದೆ ಕಿರು ನೀರು ಸರಬರಾಜು ಘಟಕವನ್ನು ₹ 80 ಸಾವಿರ ವೆಚ್ಚದಲ್ಲಿ ನಿರ್ಮಿಸಲು ನಿರ್ಣಯ ಕೈಗೊಂಡು ಕಾಮಗಾರಿ ಪ್ರಾರಂಭಿಸಲಾಗಿತ್ತು. ನಂತರ ಕೊರೊನಾ ಮತ್ತು ಪಂಚಾಯಿತಿ ಚುನಾವಣೆ ನೆಪದಲ್ಲಿ ಕಾಮಗಾರಿ ಕೈಗೊಂಡಿರಲಿಲ್ಲ ಎಂದು
ಹೇಳಿದರು.

ಅಧ್ಯಕ್ಷರು ಬದಲಾವಣೆ ಯಾಗುತ್ತಿದ್ದಂತೆ ಪಿಡಿಒ ಅವರು ಅಧ್ಯಕ್ಷರ ಒತ್ತಡಕ್ಕೆ ಮಣಿದು ಕಾಮಗಾರಿಯನ್ನು ಸ್ಥಳಾಂತರಿಸಿದ್ದಾರೆ. ಇದರಿಂದ ಕಳೆದ ಮೂರು ತಿಂಗಳಿಂದಲೂ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಹಲವಾರು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದ ಕಾರಣ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ADVERTISEMENT

ಅಧ್ಯಕ್ಷೆ ನಾಗಮ್ಮ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಸಭೆ ನಡೆಯುತ್ತಿದ್ದು, ಪ್ರತಿಭಟನಾಕಾರರು ಮೊದಲಿಗೆ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು. ಸಭೆ ಮುಂದುವರಿದ ಕಾರಣ ಅಸಮಾಧಾನಗೊಂಡ ಪ್ರತಿಭಟನಾಕಾರರು ಪಂಚಾಯಿತಿ ಕಚೇರಿಗೆ ಬೀಗ ಜಡಿಯುವ ಮಟ್ಟಕ್ಕೆ ಹೋದರು.

ಆಗ ಪಿಡಿಒ ಸೌಮ್ಯಾ, ಸಮಸ್ಯೆಯನ್ನು ಆಲಿಸಿ ಎರಡು ದಿನದಲ್ಲಿ ನೀರಿನ ವ್ಯವಸ್ಥೆ ಮಾಡುವ ಭರವಸೆ
ನೀಡಿದರು. ಅಲ್ಲಿಯವರೆಗೂ ಟ್ಯಾಂಕರ್‌ನಲ್ಲಿ ನೀರಿನ ಸರಬರಾಜು ಮಾಡುವುದಾಗಿ ತಿಳಿಸಿದ ಮೇರೆಗೆ ಪ್ರತಿಭಟನೆ ಹಿಂಪಡೆ
ಯಲಾಯಿತು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೂರ್ತಿ, ಹುಚ್ಚಲಕ್ಕಯ್ಯನಪಾಳ್ಯದ ವೆಂಕಟೇಶ್, ಶಿವಮ್ಮ, ಪ್ರಮೀಳಾ, ಸಾವಿತ್ರಮ್ಮ, ಜಯಮ್ಮ, ಮುದ್ದಪ್ಪ, ಚಿಕ್ಕಯ್ಯ, ನಿಂಗಯ್ಯ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.