ತುಮಕೂರು: ‘ಕಾಯಕವನ್ನು ಪ್ರಮುಖವಾಗಿಸಿಕೊಂಡಿರುವ ಮಡಿವಾಳ, ಕುಂಬಾರ, ಕಮ್ಮಾರ, ಚಮ್ಮಾರ, ನೇಕಾರ,ವಿಶ್ವಕರ್ಮ, ರೈತ ಸಮುದಾಯದಲ್ಲಿ ರಾಜಕೀಯ ಪ್ರಜ್ಞೆ ಬೆಳೆಯದ ಹೊರತು ಸಾಮಾಜಿಕ ಭದ್ರತೆ ಅಸಾಧ್ಯ’ ಎಂದು ದೇವರಾಜ ಅರಸು ಅಭಿವೃದ್ಧಿ ನಿಗಮ ಅಧ್ಯಕ್ಷ ರಘು ಕೌಟಿಲ್ಯ ಅಭಿಪ್ರಾಯಪಟ್ಟರು.
ಜಿಲ್ಲಾ ಮಡಿವಾಳರ ಸಂಘ, ಜಿಲ್ಲಾ ನೌಕರರ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಪ್ರತಿಭಾಪುರಸ್ಕಾರ, ಸಮುದಾಯಭವನ ಉದ್ಘಾಟನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಕೌಶಲ ತರಬೇತಿ ಪಡೆಯದೆ ತಂದೆ, ತಾತರಿಂದ ಬಂದಅನುಭವವನ್ನು ಮುಂದಿಟ್ಟು ಸಮಾಜದ
ಇತರ ವರ್ಗಗಳ ಸೇವೆಯಲ್ಲಿ ಕಾಯಕಸಮುದಾಯಗಳು ತೊಡಗಿವೆ. ಈ ಸಮುದಾಯಗಳನ್ನು ಗುರುತಿಸಲು ನಾವುಗಳು ರಾಜಕೀಯ ಪ್ರಜ್ಞೆ ಜೊತೆಗೆ ಮುತ್ಸದ್ದಿತನ ಹೊಂದಬೇಕಿದೆ. ಇಲ್ಲದಿದ್ದಲ್ಲಿ ಹಿಂದೂಗಳಲ್ಲಿಯೇ ಅಲ್ಪಸಂಖ್ಯಾತರಾಗಿ ಬದುಕಬೇಕಾಗುತ್ತದೆ ಎಂದರು.
ಮಡಿವಾಳ ಸಮಾಜದ ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ತಳ ಸಮುದಾಯಗಳು ಜಾತಿಯ ಕೀಳರಿಮೆಯಿಂದ ಹೊರಬರಬೇಕು. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳ
ಬೇಕು. ಹೋರಾಟದಿಂದ ಮಾತ್ರ ಅದು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಲಕ್ಷ್ಮಣ್, ದೋಬಿಘಾಟ್ ಇಂದಿಗೂಸಮುದಾಯದ ಹೆಸರಿಗೆ ಖಾತೆ
ಯಾಗಿಲ್ಲ. ಶಾಸಕರು ಈ ಕೆಲಸ ಮಾಡಿಸಿಕೊಡಬೇಕು. ಬಟ್ಟೆ ತೊಳೆಯಲು ಅಗತ್ಯವಿರುವ ಯಂತ್ರೋಪಕರಣಗಳನ್ನು ನೀಡಬೇಕು ಎಂದರು.
ಸಮುದಾಯಭವನ ಉದ್ಘಾಟಿಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹ 25 ಲಕ್ಷ ನೀಡುವೆ ಎಂದು ಘೋಷಿಸಿದರು.
ಮಡಿವಾಳ ನೌಕರರ ಸಮಾಜ ಸೇವಾ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್, ಜಿ.ಪಂ.ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಿ, ಜಿಲ್ಲಾ ಮಡಿವಾಳ ವಿದ್ಯಾರ್ಥಿ ನಿಲಯದ ಅಧ್ಯಕ್ಷಶಾಂತಕುಮಾರ್, ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಮುಖಂಡರಾದ ರುದ್ರೇಶ್,ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್, ವಿಷ್ಣುವರ್ಧನ್, ರಮೇಶ್, ಆನಂದಮೂರ್ತಿ, ಕುಮಾರ್, ಜೆ.ಆರ್.ಗಿರೀಶ್, ವಿಶ್ವಾಸ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.