ತುಮಕೂರು: ಸಿಆರ್ಪಿಎಫ್ ಯೋಧನ ಪತ್ನಿ ಅನುಮಾನಸ್ಪದ ರೀತಿಯಲ್ಲಿ ನೇಣು ಹಾಕಿಕೊಂಡು ಸಾವನಪ್ಪಿರುವ ಘಟನೆ ತಾಲ್ಲೂಕಿನ ಲಕ್ಕೇನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
ಗೌರಮ್ಮ (27) ಮೃತ ಮಹಿಳೆ. ಸಿಆರ್ಪಿಎಫ್ ಯೋಧ ರವೀಶ್ ಹಾಗೂ ಗೌರಮ್ಮ 6 ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದರು. ಈ ನಡುವೆ ಗೌರಮ್ಮ 3 ತಿಂಗಳ ಗರ್ಭಿಣಿಯೂ ಆಗಿದ್ದರು. ಮದುವೆಯಾದ ನಂತರ ಗಂಡನ ಮನೆಯವರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಊರಿಗೆ ವಾಪಸಾಗಿದ್ದ ಗಂಡ ರವೀಶ್ ಕೂಡ ಮನೆಯವರೊಟ್ಟಿಗೆ ಸೇರಿ ಕಿರುಕುಳ ನೀಡುತ್ತಿದ್ದರು ಎಂದು ಗೌರಮ್ಮ ಕುಟುಂಬಸ್ಥರು ದೂರಿದ್ದಾರೆ.
ಕಿರುಕುಳ ತಾಳಲಾರದೆ ಗೌರಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ, ಮೃತಪಟ್ಟಿರುವುದು ಗೊತ್ತಾದ ಬಳಿಕ ರವೀಶ್ ಮನೆಯವರು ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅದ್ಧೂರಿ ಮದುವೆ: ಮದುವೆ ಸಂದರ್ಭದಲ್ಲಿ ಸಾಕಷ್ಟು ಒಡವೆ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಇಷ್ಟಾದರೂ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು. ಸಂಬಂಧಿಕರ ಜತೆಯೂ ಮಾತನಾಡಲು ಬಿಡದೆ ಮಾನಸಿಕ ಹಿಂಸೆ ಕೊಡುತ್ತಿದ್ದರು. ಹಣ, ಒಡವೆ ತರುವಂತೆ ಒಡೆಯುತ್ತಿದ್ದರು. ಇದೀಗ ಆಕೆಯ ಸಾವಿಗೆ ಗಂಡನ ಮನೆಯವರ ಕಿರುಕುಳವೇ ಕಾರಣ ಎಂದು ಗೌರಮ್ಮ ಕುಟುಂಬಸ್ಥರು ತುಮಕೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಾಗಿದ್ದು, ರವೀಶ್ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.