
ತುಮಕೂರು: ‘ಕುಡಿಯುವ ನೀರು ಕಲುಷಿತವಾಗದಂತೆ ಕ್ರಮ ವಹಿಸಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯ 694 ಕೊಳವೆ ಬಾವಿಗಳ ನೀರಿನ ಗುಣಮಟ್ಟ ಪರೀಕ್ಷಿಸಬೇಕು’ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
‘ನಗರದಲ್ಲಿ 30 ಕಡೆ ನೀರು ಕಲುಷಿತ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಶನಿವಾರ ವರದಿ ಪ್ರಕಟವಾಗಿತ್ತು.
ನಗರದ ಪಾಲಿಕೆ ಕಚೇರಿಯಲ್ಲಿ ಶನಿವಾರ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಸಭೆ ನಡೆಸಿದ ಶಾಸಕರು ಅಗತ್ಯ ಮಾಹಿತಿ ಪಡೆದರು. ಸಕಾಲಕ್ಕೆ ನೀರಿನ ಗುಣಮಟ್ಟ ಪರೀಕ್ಷಿಸುವಂತೆ ನಿರ್ದೇಶಿಸಿದರು.
ಪ್ರತಿ ಮನೆಗೆ ಶುದ್ಧ ನೀರು ಸರಬರಾಜು ಮಾಡಬೇಕು. ಪ್ರತಿ ದಿನ ಕಾಲೊನಿ, ಹಾಸ್ಟೆಲ್, ಶಾಲಾ-ಕಾಲೇಜು, ಆಸ್ಪತ್ರೆ, ಹೋಟೆಲ್, ಬಸ್ ನಿಲ್ದಾಣ ಹಾಗೂ ವಿವಿಧೆಡೆ ಇರುವ ಕೊಳವೆ ಬಾವಿ ನೀರು ಪರೀಕ್ಷಿಸಬೇಕು. ಇದಕ್ಕಾಗಿ ಪಿಎನ್ಆರ್ ಪಾಳ್ಯದಲ್ಲಿ ಪ್ರಯೋಗಾಲಯ ಆರಂಭಿಸಲಾಗಿದೆ. ಇಲ್ಲಿ ಪರೀಕ್ಷೆ ಮಾಡಿಸಬೇಕು ಎಂದರು.
ಕುಡಿಯುವ ನೀರು ಪೈಪ್ಲೈನ್ಗೆ ಯುಜಿಡಿ ನೀರು ಸೇರದಂತೆ ನೋಡಿಕೊಳ್ಳಬೇಕು. ನೀರು ಕುಡಿಯಲು ಯೋಗ್ಯವೇ ಎಂಬುವುದನ್ನು ಖಚಿತ ಪಡಿಸಿಕೊಂಡ ನಂತರವೇ ಪೂರೈಕೆ ಮಾಡಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಸಿ.ಯೋಗಾನಂದ, ಉಪ ಆಯುಕ್ತ ಮನು, ಆರೋಗ್ಯಾಧಿಕಾರಿ ಡಾ.ಯೋಗೀಶ್, ಎಂಜಿನಿಯರ್ಗಳಾದ ಸಂದೀಪ್, ವಿನಯ್, ಅನಿಲ್, ಪ್ರವೀಣ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.