ಶಿರಾ: ‘ಹೈನು ರಾಸುಗಳು ಅಕಾಲಿಕವಾಗಿ ಮೃತಪಟ್ಟಾಗ ಉಂಟಾಗುವ ಆರ್ಥಿಕ ಸಂಕಷ್ಟ ತಪ್ಪಿಸಲು ಹೈನುಗಾರಿಕೆಯಲ್ಲಿ ತೊಡಗಿರುವ ಪ್ರತಿಯೊಬ್ಬರು ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು’ ಎಂದು ತುಮುಲ್ ನಿರ್ದೇಶಕ ಎಸ್.ಆರ್. ಗೌಡ ಹೇಳಿದರು.
ತಾಲ್ಲೂಕಿನ ಕಡವಿಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ 2022-23ನೇ ಸಾಲಿನ ಜಾನುವಾರು ಗುಂಪು ವಿಮಾ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ತುಮಕೂರು ಹಾಲು ಒಕ್ಕೂಟದಿಂದ ಉಚಿತವಾಗಿ ರಾಸುಗಳಿಗೆ ಗುಂಪು ವಿಮಾ ಯೋಜನೆ ಪ್ರಾರಂಭಿಸಿದ್ದು ಉತ್ಪಾದಕರು ಇದರ ಪ್ರಯೋಜನ ಪಡೆಯಬೇಕಿದೆ ಎಂದರು.
ತಾಲ್ಲೂಕಿನಲ್ಲಿ 2021-22ನೇ ಸಾಲಿನಲ್ಲಿ 13,095 ರಾಸುಗಳಿಗೆ ವಿಮೆ ಮಾಡಿಸಲಾಗಿತ್ತು. ಈ ಪೈಕಿ 150 ರಾಸುಗಳು ಮೃತಪಟ್ಟ ಹಿನ್ನೆಲೆಯಲ್ಲಿ ₹ 1.40 ಕೋಟಿ ವಿಮಾ ಮೊತ್ತವನ್ನು ರೈತರಿಗೆ ವಿತರಿಸಲಾಗಿದೆ ಎಂದರು.
ಸಂಘದ ಅಧ್ಯಕ್ಷ ಸುರೇಶ್, ಒಕ್ಕೂಟದ ಉಪ ವ್ಯವಸ್ಥಾಪಕ ಮಧುಸೂದನ್, ವಿಸ್ತರಣಾಧಿಕಾರಿ ದಿವಾಕರ್, ಸಮಾಲೋಚಕ ಪ್ರವೀಣ್, ಶ್ರೀನಿವಾಸ್, ಡಾ.ಶ್ರೀಕಾಂತ್, ಡಾ.ಆದರ್ಶ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.