ADVERTISEMENT

ಹುಳಿಯಾರು | ಕೈ ಕೊಟ್ಟ ಮಳೆ: ಒಣಗುತ್ತಿದೆ ಬೆಳೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 3:00 IST
Last Updated 6 ಅಕ್ಟೋಬರ್ 2025, 3:00 IST
ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಾರದೆ ಬಾಡುತ್ತಿರುವ ರಾಗಿ ಬೆಳೆ
ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಾರದೆ ಬಾಡುತ್ತಿರುವ ರಾಗಿ ಬೆಳೆ   

ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುವ ಹಂತ ತಲುಪಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಜಾನುವಾರುಗಳ ಮೇವಿಗೆ ಕೊರತೆಯ ಆತಂಕ ಆವರಿಸಿದೆ.

ಪೂರ್ವ ಮುಂಗಾರು ಸಹ ಈ ಬಾರಿ ರೈತರ ಕೈ ಹಿಡಿಯಲಿಲ್ಲ. ಆದರೆ ಹಿಂಗಾರಿನಲ್ಲಾದರೂ ಮಳೆ ಬಂದು ರೈತರ ಜೀವನಕ್ಕೆ ಸಹಾಯ ಮಾಡುತ್ತದೆ ಎಂಬ ಭರವಸೆ ಹುಸಿಯಾಗಿದೆ. ಈ ಬಾರಿ ರಾಗಿ ಬಿತ್ತನೆಗೆ ಪೂರಕ ಮಳೆ ಬಾರದೆ ಬಿತ್ತನೆ ತಡವಾಗಿದೆ. ತಿಂಗಳ ಹಿಂದೆ ಕೆಲ ಭಾಗಗಳಲ್ಲಿ ಸೋನೆ ಮಳೆ ಆಗಿತ್ತು. ರೈತರು ಜಮೀನುಗಳನ್ನು ಸ್ವಚ್ಛಗೊಳಿಸಿ ರಾಗಿ, ನವಣೆ, ಸಾಮೆ ಬಿತ್ತನೆ ಮಾಡಿದ್ದರು. ಮೋಡ ಮುಸುಕಿದ ವಾತಾವರಣ ಹಾಗೂ ಆಗಾಗ ಸೋನೆ ಮಳೆ ಆಗುತ್ತಿದ್ದ ಕಾರಣ ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆದಿತ್ತು. ನಂತರದ ದಿನಗಳಲ್ಲಿ ಉತ್ತಮ ಮಳೆ ಬಂದ ಕಾರಣ ಪೈರು ಉತ್ತಮವಾಗಿ ಬೆಳೆದಿತ್ತು.

15 ದಿನಗಳಿಂದ ಮಳೆ ಇಲ್ಲದೆ, ಬಿಸಿಲ ಝಳ ಹೆಚ್ಚಾದ ಕಾರಣ ಪೈರು ಒಣಗಿದೆ. ಉತ್ತರ ಮಳೆಯೂ ಕೈಕೊಟ್ಟಿದೆ. ಹಸ್ತ ಮಳೆ ಆರಂಭವಾಗಿದ್ದು ಕೆಲ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ರಾಗಿ ಹೊಲಗಳಲ್ಲಿ ಕುಂಟೆ ಹೊಡೆದು ಕಳೆ ತೆಗೆದು ಮಳೆಗೆ ಕಾಯುತ್ತಿದ್ದಾರೆ. ಬೇಗ ಬಿತ್ತನೆಯಾಗಿದ್ದ ರಾಗಿ ಹೊಲಗಳಲ್ಲಿ ತೆನೆ ಕಾಣಿಸಿಕೊಳ್ಳುತ್ತಿದೆ. ಕೆಲವು ಹೊಲಗಳಲ್ಲಿ ತೆನೆ ಕೂಡ ಕಾಣಿಸಿಕೊಂಡಿದ್ದು ಕಾಳು ಕಟ್ಟುವ ಹಂತದಲ್ಲಿದೆ. ಆದರೆ ಮಳೆ ಕೊರತೆಯಿಂದ ಒಣಗುತ್ತಿದ್ದು, ಕಾಳು ಕಟ್ಟಲು ತೊಂದರೆಯಾಗಿದೆ ಎನ್ನುವುದು ರೈತರ ಅಭಿಪ್ರಾಯ. 

ADVERTISEMENT

ತುಂತುರು ನೀರಾವರಿ ಪರಿಕರ ವಿತರಣೆ: ಮಳೆ ಬಾರದೆ ರಾಗಿ ಸೇರಿದಂತೆ ಇತರ ಬೆಳೆಗಳು ಒಣಗುತ್ತಿವೆ. ಕೃಷಿ ಇಲಾಖೆಯಿಂದ ರೈತರು ಅರ್ಜಿ ಹಾಕಿ ತುರ್ತಾಗಿ ತುಂತುರು ನೀರಾವರಿ ಪರಿಕರಗಳನ್ನು ಪಡೆಯಬಹುದು. ಕೊಳವೆಬಾವಿ ಹಾಗೂ ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹಿಸಿದ್ದರೆ ಬೆಳೆಗಳಿಗೆ ನೀರುಣಿಸಿ ಜೀವ ನೀಡಬಹುದು. ತುಂತುರು ನೀರಾವರಿ ಘಟಕದ ಮೂಲಕ ನೀರು ನೀಡಿದರೆ ಮುಂದಿನ ಮಳೆ ಬರುವವರೆಗೆ ಬೆಳೆಯನ್ನು ಕಾಪಾಡಬಹುದು.

ಎಚ್‌.ಎಸ್. ಶಿವರಾಜ್‌ಕುಮಾರ್‌, ಸಹಾಯಕ ಕೃಷಿ ನಿರ್ದೇಶಕ, ಚಿಕ್ಕನಾಯಕನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.