
ಕೊರಟಗೆರೆ: ರಾಜ್ಯ ಸರ್ಕಾರ ‘ಮನೆ ಬಾಗಿಲಿಗೆ ಸೇವೆ’ ಎಂಬ ಘೋಷಣೆಯೊಂದಿಗೆ ಜಾರಿಗೊಳಿಸಿದ ಇ–ಸ್ವತ್ತು ಯೋಜನೆ, ಆರಂಭವಾಗಿ ತಿಂಗಳು ಕಳೆದಿದ್ದರೂ ಇನ್ನೂ ನೆಲಮಟ್ಟದಲ್ಲಿ ಅನುಷ್ಠಾನ ಕಾಣದೆ ಗ್ರಾಮೀಣ ಜನರ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ತಾಂತ್ರಿಕ ಸಮಸ್ಯೆಗಳನ್ನೇ ನೆಪವನ್ನಾಗಿ ಮಾಡಿಕೊಂಡು ಪ್ರಕ್ರಿಯೆ ಅಸ್ತವ್ಯಸ್ತವಾಗಿದ್ದು, ಇದಕ್ಕೆ ಹೊಣೆಗಾರರಾದವರು ಯಾರು ಎಂಬ ಪ್ರಶ್ನೆ ದಿನೇದಿನೇ ತೀವ್ರವಾಗುತ್ತಿದೆ.
ಇ–ಸ್ವತ್ತು ನೋಂದಣಿಗೆ ಬಳಸಲಾಗುತ್ತಿರುವ ಸಾಫ್ಟ್ವೇರ್ ನಿರಂತರವಾಗಿ ಸರ್ವರ್ ಡೌನ್, ಡೇಟಾ ಅಪ್ಲೋಡ್ ವೈಫಲ್ಯ, ಜಿಯೋ–ಮ್ಯಾಪಿಂಗ್ ದೋಷ, ಹಳೆಯ ದಾಖಲೆಗಳ ಹೊಂದಾಣಿಕೆ ಸಮಸ್ಯೆ ಎದುರಿಸುತ್ತಿದೆ. ಯೋಜನೆ ಜಾರಿಗೊಳಿಸುವ ಮುನ್ನ ಸಮರ್ಪಕ ಪರೀಕ್ಷೆ ನಡೆಸಲಾಗಿದೆಯೇ? ಗ್ರಾಮೀಣ ಪ್ರದೇಶದ ನೆಟ್ವರ್ಕ್ ಸಾಮರ್ಥ್ಯ ಪರಿಗಣಿಸಲಾಯಿತೇ? ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಮೂಡಿವೆ.
ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಬೆಳಗ್ಗೆಯಿಂದ ಸಂಜೆವರೆಗೆ ಜನ ಕಾದು ಕುಳಿತರೂ ‘ಇಂದು ಸಿಸ್ಟಂ ಇಲ್ಲ’ ಎಂಬ ಉತ್ತರವೇ ಸಿಗುತ್ತಿದೆ. ದಿನದ ಕೂಲಿ ಬಿಟ್ಟು ಬಂದ ರೈತರು, ಕೂಲಿ ಕಾರ್ಮಿಕರು, ವೃದ್ಧರು, ಮಹಿಳೆಯರು ನಿರಾಶರಾಗಿ ಮನೆಗೆ ಹಿಂತಿರುಗುವ ಸ್ಥಿತಿ ನಿರ್ಮಾಣವಾಗಿದೆ. ಕೆಲವರು ತಿಂಗಳಿನಿಂದ ಅರ್ಜಿ ಸಲ್ಲಿಸಿದ್ದರೂ ಇ–ಸ್ವತ್ತು ದಾಖಲೆ ಇನ್ನೂ ಕೈ ಸೇರಿಲ್ಲ.
ಒಂದು ಕಡೆ ಮೇಲಧಿಕಾರಿಗಳಿಂದ ಗುರಿ ಒತ್ತಡ, ಮತ್ತೊಂದೆಡೆ ಸರಿಯಾಗಿ ಕಾರ್ಯನಿರ್ವಹಿಸದ ತಂತ್ರಜ್ಞಾನ. ಅಗತ್ಯ ತರಬೇತಿ ಮತ್ತು ತಾಂತ್ರಿಕ ಬೆಂಬಲವಿಲ್ಲದೆ ಪಂಚಾಯಿತಿ ಸಿಬ್ಬಂದಿಯೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಪ್ಪು ತಮ್ಮದಲ್ಲವಾದರೂ ಸಾರ್ವಜನಿಕರ ಆಕ್ರೋಶ ಎದುರಿಸಬೇಕಾದ ಸ್ಥಿತಿ ಉಂಟಾಗಿದೆ.
ಈ ಗಂಭೀರ ಸಮಸ್ಯೆ ಬಗ್ಗೆ ತಾಲ್ಲೂಕು, ಜಿಲ್ಲಾ ಮಟ್ಟದ ಜನಪ್ರತಿನಿಧಿಗಳು ಸ್ಪಷ್ಟ ನಿಲುವು ಪ್ರಕಟಿಸದೇ ಮೌನಕ್ಕೆ ಶರಣಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚುನಾವಣೆ ಸಂದರ್ಭಗಳಲ್ಲಿ ‘ಗ್ರಾಮೀಣ ಅಭಿವೃದ್ಧಿ’, ‘ಡಿಜಿಟಲ್ ಸೇವೆ’ ಎಂದು ಮಾತಾಡಿದವರು ಈಗ ಜನರ ಸಂಕಷ್ಟದ ಸಮಯದಲ್ಲಿ ಮೌನವಾಗಿರುವುದೇಕೆ ಎಂಬ ಪ್ರಶ್ನೆ ಎದ್ದಿದೆ.
ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಈ ವಿಷಯ ಗಂಭೀರವಾಗಿ ಚರ್ಚೆಯಾಗುತ್ತಿಲ್ಲ. ಶಾಸಕರು, ಸಂಸದರು ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆಯೇ ಎಂಬುದೂ ಅನುಮಾನ.
ಇ–ಸ್ವತ್ತು ದಾಖಲೆ ಸಿಗದ ಕಾರಣದಿಂದಾಗಿ ಅನೇಕರು ತಮ್ಮ ಆಸ್ತಿಗಳನ್ನು ಸರ್ಕಾರದ ನಿಯಮಾನುಸಾರ ಭದ್ರಪಡಿಸಿಕೊಳ್ಳಲಾಗದೇ ಪರಿತಪಿಸುತ್ತಿದ್ದಾರೆ. ಬ್ಯಾಂಕ್ ಸಾಲ, ಮನೆ ನಿರ್ಮಾಣ ಪರವಾನಗಿ, ಖಾತಾ ವರ್ಗಾವಣೆ, ವಾರಸುದಾರಿಕೆ ದಾಖಲಾತಿ ಸೇರಿದಂತೆ ಹಲವು ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಇದು ಗ್ರಾಮೀಣ ಆರ್ಥಿಕ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಸರ್ಕಾರ ಇ–ಸ್ವತ್ತು ಯೋಜನೆಯನ್ನು ಘೋಷಣೆಗಷ್ಟೇ ಸೀಮಿತಗೊಳಿಸದೇ, ತಕ್ಷಣ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ, ಜನರ ಆಸ್ತಿ ಭದ್ರತೆಗೆ ರಕ್ಷಣೆಯಾಗಿ ರೂಪಿಸಿದ ಇ–ಸ್ವತ್ತು ಯೋಜನೆಯೇ ಗ್ರಾಮೀಣ ಜನರ ಪಾಲಿಗೆ ಶಾಶ್ವತ ಸಂಕಷ್ಟವಾಗುವ ಭೀತಿ ಎದುರಾಗಿದೆ.
ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನ ಪ್ರಾರಂಭವಾದ ಬಳಿಕ 234 ಅರ್ಜಿಗಳು ಮಾತ್ರ ವಿಲೇವಾರಿಯಾಗಿದೆ. ಉಳಿದಂತೆ ವಿವಿಧ ತಾಂತ್ರಿಕ ತೊಂದರೆಯಿಂದಾಗಿ ಸುಮಾರು 49,521 ಇ-ಸ್ವತ್ತು ಅರ್ಜಿಗಳು ಬಾಕಿ ಇವೆ. ತೋವಿನಕೆರೆ, ಹೊಳವನಹಳ್ಳಿ ಗ್ರಾ.ಪಂ.ನಲ್ಲಿ ಅತಿ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ.
ತಂತ್ರಾಂಶದಲ್ಲಿನ ದೋಷ
ರೂಲ್ಸ್ನಲ್ಲಿ ಮ್ಯುಟೇಶನ್ಗೆ 15 ದಿನ ಇದೆ. 7 ದಿನ ನೋಟಿಸ್ ಅವಧಿ ಹಾಗೂ 7 ದಿನ ಪಿಡಿಒ ಅನುಮೋದನೆ. ಆದರೆ ಸಾಫ್ಟ್ವೇರ್ನಲ್ಲಿ 30 ದಿನದ ನೋಟಿಸ್ ಜನರೇಟ್ ಆಗುತ್ತಿದೆ. ಇಸಿ ವಿವರಗಳನ್ನು ದಾಖಲಿಸಲು ಸಾಧ್ಯವಾಗುತ್ತಿಲ್ಲ. ಸರಿಯಾದ ದಾಖಲೆ ಸಂಖ್ಯೆ ಹಾಕಿದರೂ ಸಹ ತಪ್ಪಾಗಿದೆ ಎಂದು ಹೇಳುತ್ತದೆ. ಮಾಲೀಕರ ಇ-ಕೆವೈಸಿ ಮಾಡಲು ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ. ಎಲ್ಲ ಹಂತಗಳು ಪೂರ್ಣಗೊಂಡ ನಂತರ ಸೇವ್ ಅಂಡ್ ಪ್ರೊಸೀಡ್ ಮಾಡಿದಾಗ ಯಾವುದೇ ಸಂದೇಶ ತೋರಿಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. 2004ರ ಹಿಂದಿನ ಮಾರಾಟ ದಾಖಲೆ ಮಾಡುವ ಸಂದರ್ಭದಲ್ಲಿ ದಿನಾಂಕ ನಮೂದಿಸಲು ಸಾಧ್ಯವಾಗುತ್ತಿಲ್ಲ. ಸರ್ವರ್ ಸಿಸ್ಟಮ್ ಪದೇ ಪದೇ ಲಾಗೌಟ್ ಆಗುತ್ತಿದೆ. ಗ್ರಾಮ ಠಾಣಾ ವ್ಯಾಪ್ತಿಯ ಅರ್ಜಿ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಅನುಮೋದನೆಯಾದ ನಂತರ ಪಿಡಿಒ ಲಾಗಿನ್ ಅನುಮೋದನೆಯಾಗುತ್ತಿಲ್ಲ. ಪಿತ್ರಾರ್ಜಿತ ಆಸ್ತಿಗಳಿಗೆ ನೊಂದಣಿ ಪ್ರತಿ ಮತ್ತು ಸೇಲ್ಡೀಡ್ ಇರುವುದಿಲ್ಲ. ಈ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದದಲ್ಲಿ ಸೇಲ್ಡೀಡ್ ಪ್ರತಿ ನೀಡುವುದು ಕಡ್ಡಾಯ. ಮೂಲ ಕರಾರಿನ ಪಿತ್ರಾರ್ಜಿತ ಆಸ್ತಿಗಳಿಗೆ ಇ-ಸ್ವತ್ತು ನೀಡಲು ತಂತ್ರಾಂಶದಲ್ಲಿ ಸಾಧ್ಯವಾಗುತ್ತಿಲ್ಲ. ಈಗಾಗಲೇ ಸೃಜನೆಯಾಗಿರುವ ನಮೂನೆಗಳನ್ನು ಮರುಮುದ್ರಣ ಮಾಡಿಕೊಳ್ಳಲು ತೊಂದರೆ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.