ತುಮಕೂರು: ಶಾಲೆಗಳಿಗೆ ಒದಗಿಸಿರುವ ಎಸ್ಸೆಸ್ಸೆಲ್ಸಿ ಅಭ್ಯಾಸ ಪತ್ರಿಕೆಗಳನ್ನು ಪರೀಕ್ಷಾ ವೇಳಾಪಟ್ಟಿಯಂತೆ ಮೌಲ್ಯಮಾಪನ ಪ್ರಕ್ರಿಯೆಗೆ ಒಳಪಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ನಂಜಯ್ಯ ಹೇಳಿದರು.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನೇತೃತ್ವದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಸಂಬಂಧದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಂದಣಿಗೆ ಅವಧಿ ವಿಸ್ತರಿಸಲಾಗಿದ್ದು, ಅಗತ್ಯ ಕ್ರಮವಹಿಸಬೇಕು ಎಂದು ಶಿಕ್ಷಕರಿಗೆ ತಿಳಿಸಿದರು.
ಮಂಡಳಿ ಕಾರ್ಯದರ್ಶಿ ಕೆಂಪರಾಜು, ‘ಕೋವಿಡ್–19ನಿಂದಾಗಿ ಪಠ್ಯ ಕಡಿತ, ಸರಳವಾಗಿ ಪ್ರಶ್ನೆಪತ್ರಿಕೆಗಳು ಇರುವುದರಿಂದ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದಾಗಿದೆ. 14ನೇ ಸ್ಥಾನದಲ್ಲಿರುವ ಜಿಲ್ಲೆಯನ್ನು ಉನ್ನತ
ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಶಿಕ್ಷಕರು, ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ’ ಸಲಹೆ ಮಾಡಿದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಶ್ನೆಪತ್ರಿಕೆಯಲ್ಲಿ ಶೇ 40ರಷ್ಟು ಸುಲಭ, ಶೇ 50ರಷ್ಟು ಸಾಧಾರಣ, ಶೇ 10ರಷ್ಟು ಕಠಿಣ ಪ್ರಶ್ನೆಗಳಿಗೆ ಆದ್ಯತೆ ನೀಡಲು ಮಂಡಳಿ ತೀರ್ಮಾನಿಸಿದೆ. ಮಂಡಳಿಯು ವೆಬ್ಸೈಟ್ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟಿಸಿದೆ. ಪ್ರಶ್ನೆಗಳ ಸಂಖ್ಯೆ, ಪ್ರಶ್ನೆಗಳ ಸ್ವರೂಪ, ನಿಗದಿಪಡಿಸಿರುವ ಅಂಕಗಳ ವಿವರ ಇದೆ. 30 ಅಂಕಗಳಿಗೆ ಬಹು ಅಂಶ ಆಯ್ಕೆ ಪ್ರಶ್ನೆಗಳು ಬರುವುದಿಲ್ಲ. ಮಾದರಿಪ್ರಶ್ನೆ ಪತ್ರಿಕೆಯಂತೆ ಇರುತ್ತದೆ ಎಂದು ವಿವರಿಸಿದರು.
ಶಿಕ್ಷಣಾಧಿಕಾರಿ ರಂಗದಾಸಪ್ಪ, ‘ಈ ಬಾರಿಯ ಪ್ರಶ್ನೆಪತ್ರಿಕೆ ಸ್ವರೂಪದಲ್ಲಿ ಅನ್ವಯ ಮಟ್ಟದ ಪ್ರಶ್ನೆಗಳನ್ನು ಕಡಿಮೆಗೊಳಿಸಲಾಗಿದೆ. ಸ್ಮರಣೆ, ತಿಳವಳಿಕೆ ಮಟ್ಟದ ಪ್ರಶ್ನೆಗಳಿಗೆ ಆದ್ಯತೆ ನೀಡಲಾಗಿದೆ. ಶಾಲೆಯ ಮುಖ್ಯ ಶಿಕ್ಷಕರು ಗಮನಹರಿಸಬೇಕು’ ಎಂದರು.
ಡಯಟ್ ಪ್ರಾಂಶುಪಾಲ ಕೆ.ಮಂಜುನಾಥ್,ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯ್ಕ್, ನೋಡಲ್ ಅಧಿಕಾರಿ ನವೀನ್ಕುಮಾರ್,ಆಶಾರಾಣಿ, ಶಿಕ್ಷಣ ಸಂಯೋಜಕರಾದ ಚಂದ್ರಣ್ಣ, ಮಂಜುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.