ADVERTISEMENT

ಶಿರಾ | ವೃದ್ಧೆ ಕೊಲೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 6:41 IST
Last Updated 12 ನವೆಂಬರ್ 2025, 6:41 IST
ಶ್ರೀಧರ್
ಶ್ರೀಧರ್   

ಶಿರಾ: ತಾಲ್ಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯ ದೊಡ್ಡಬಾಣಗೆರೆಯಲ್ಲಿ ಪುಟ್ಟೀರಮ್ಮ (86) ಅವರನ್ನು ಕೊಲೆ ಮಾಡಿ 53 ಗ್ರಾಂ ಚಿನ್ನದ ಸರ ಅಪಹರಿಸಿದ್ದ ಶ್ರೀಧರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಪುಟ್ಟೀರಮ್ಮ ಮನೆಯಲ್ಲಿ ಒಂಟಿಯಾಗಿದ್ದಾಗ ಹಿಂದಿನಿಂದ ಬಂದ ಅದೇ ಗ್ರಾಮದ ಶ್ರೀಧರ್ ಬಟ್ಟೆಯ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೆಳಗೆ ಬೀಳಿಸಿ ಮುಖಕ್ಕೆ ಟವೆಲ್ ಒತ್ತಿ ಹಿಡಿದು ಕೊಲೆ ಮಾಡಿ ಆಕೆಯ ಕೊರಳಿನಲ್ಲಿದ್ದ 53 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದ.

ಪುಟ್ಟೀರಮ್ಮ ಪುತ್ರ ವೀರಣ್ಣ ನೀಡಿದ ದೂರು ಆಧರಿಸಿ ಪೊಲೀಸರು ಶಿರಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸುಲಿಗೆ ಮಾಡಿದ್ದ ಸರವನ್ನು ಬೆಂಗಳೂರು ಬಾಗಲುಗುಂಟೆಯ ಖಾಸಗಿ ಬ್ಯಾಂಕ್‌ನಲ್ಲಿ ₹2 ಲಕ್ಷಕ್ಕೆ ಗಿರವಿ ಇಟ್ಟು, ಆ ಹಣದಿಂದ ಮೊಬೈಲ್, ಬಟ್ಟೆ ಇತ್ಯಾದಿಗಾಗಿ ದುಂದು ವೆಚ್ಚ ಮಾಡಿದ್ದಾಗಿ ಒಪ್ಪಿಕೊಂಡಿದ್ದ.

ADVERTISEMENT

ಒತ್ತೆ ಇಟ್ಟಿದ್ದ ₹6 ಲಕ್ಷ ಮೌಲ್ಯದ ಸರ ಮತ್ತು ಎರಡು ಮೊಬೈಲ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಆರೋಪಿ ಶ್ರೀಧರ್ ಮದ್ಯಪಾನ, ಜೂಜಾಟದಂತಹ ದುಶ್ಚಟಗಳಿಗೆ ಒಳಗಾಗಿದ್ದು, ಹಣದ ದುರಾಸೆಗಾಗಿ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.

ಬೆಂಗಳೂರಿನ ಮಡಿವಾಳ ಮತ್ತು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ, ಸುಲಿಗೆ ಹಾಗೂ ವಂಚನೆ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.