ತುಮಕೂರು: ಪಾರ್ಟ್ಟೈಮ್ ಕೆಲಸದ ಆಮಿಷಕ್ಕೆ ಒಳಗಾಗಿ ಕುಣಿಗಲ್ ಪಟ್ಟಣದ ಹೊಸ ಬಡಾವಣೆಯ ಎಂಜಿನಿಯರ್ ಕೆ.ಜೆ.ನಿಖಿಲ್ ₹19.34 ಲಕ್ಷ ಕಳೆದುಕೊಂಡಿದ್ದಾರೆ.
ಮೆಸೇಜ್ ಮಾಡಿದ ಸೈಬರ್ ಆರೋಪಿಗಳು ಪಾರ್ಟ್ಟೈಮ್ ಕೆಲಸದ ಬಗ್ಗೆ ತಿಳಿಸಿದ್ದಾರೆ. ಪ್ರಾರಂಭದಲ್ಲಿ ಲಿಂಕ್ನಲ್ಲಿ ಕಳುಹಿಸಿದ ಚಿತ್ರಗಳಿಗೆ ರಿವೀವ್ ನೀಡಿದರೆ ಒಂದಕ್ಕೆ ₹30 ಕಮಿಷನ್ ನೀಡುತ್ತಿದ್ದರು. ದಿನಕ್ಕೆ ₹809 ಕಮಿಷನ್ ಹಣ ಎಂದು ಪಾವತಿಸಿದ್ದರು. ಇದಾದ ನಂತರ REALTORS CIRCLE 3349 ಎಂಬ ಟೆಲಿಗ್ರಾಮ್ ಗ್ರೂಪ್ಗೆ ನಿಖಿಲ್ ನಂಬರ್ ಸೇರಿಸಿದ್ದಾರೆ.
ಸದರಿ ಗ್ರೂಪ್ನಲ್ಲಿ ಟಾಸ್ಕ್ಗಳಿಗೆ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ನಿಖಿಲ್ ಮೊದಲಿಗೆ ₹10 ಸಾವಿರ ಹೂಡಿಕೆ ಮಾಡಿದ್ದು, ಅವರ ಖಾತೆಗೆ ವಾಪಸ್ ₹15,100 ವರ್ಗಾಯಿಸಿದ್ದಾರೆ. ನಂತರ ₹30,879 ಸಾವಿರ ವರ್ಗಾಯಿಸಿದ್ದು, ₹40,787 ಮರಳಿಸಿದ್ದಾರೆ. ಇನ್ನೂ ದೊಡ್ಡ ಮೊತ್ತದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ನಂಬಿಸಿದ್ದಾರೆ.
ವಾಟ್ಸ್ ಆ್ಯಪ್ನಲ್ಲಿ ಬ್ಯಾಂಕ್ ಖಾತೆಯ ವಿವರ ಕಳುಹಿಸಿದ್ದರು. ಸೈಬರ್ ಆರೋಪಿಗಳ ಮಾತು ನಂಬಿದ ನಿಖಿಲ್ ಹಂತ ಹಂತವಾಗಿ ಒಟ್ಟು ₹19,93,869 ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅವರ ಖಾತೆಗೆ ₹59,421 ಬಂದಿದೆ. ಹೂಡಿಕೆ ಮಾಡಿದ ಹಣ ವಾಪಸ್ ಕೊಡುವಂತೆ ಕೇಳಿದಾಗ ಇನ್ನೂ ₹15 ಲಕ್ಷ ಹಾಕಿದರೆ ಮಾತ್ರ ಹಣ ನೀಡಲಾಗುವುದು ಎಂದಿದ್ದಾರೆ. ಇದರಿಂದ ಅನುಮಾನ ಬಂದು ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.