ತುಮಕೂರು: ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ದಿನದ ಅಂಗವಾಗಿ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೆಡ್ಕ್ರಾಸ್, ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಸಿದ್ಧಗಂಗಾ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ ಸೈಕಲ್ ಜಾಥಾಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೈಕಲ್ ತುಳಿಯುವ ಮೂಲಕ ಚಾಲನೆ ನೀಡಿದರು.
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಟೌನ್ಹಾಲ್, ಕೃಷಿ ಮಾರುಕಟ್ಟೆ, ವಿಶ್ವವಿದ್ಯಾಲಯ, ಕಾಲ್ಟ್ಯಾಕ್ಸ್ನಲ್ಲಿ ಪ್ರಚಾರ ಮಳಿಗೆಗಳನ್ನು ಹಾಕಿ ಆರೋಗ್ಯ ಸಿಬ್ಬಂದಿ ಕರಪತ್ರಗಳನ್ನು ಹಂಚುವುದರ ಮೂಲಕ ಕ್ಷಯರೋಗದ ಬಗ್ಗೆ ಅರಿವು ಮೂಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಮಾತನಾಡಿ, ‘15 ದಿನಕ್ಕಿಂತ ಹೆಚ್ಚು ಸಮಯ ಕೆಮ್ಮು, ಕಡಿಮೆ ಹಸಿವು, ತೂಕ ಕಡಿಮೆಯಾಗುವುದು, ರಾತ್ರಿ ಬೆವರುವುದು ಕ್ಷಯ ರೋಗದ ಲಕ್ಷಣಗಳಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಸೌಲಭ್ಯವಿದ್ದು, ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. 2025ರ ವೇಳೆಗೆ ಕ್ಷಯ ರೋಗ ನಿರ್ಮೂಲನೆ ಮಾಡುವುದು ಮುಖ್ಯ ಗುರಿಯಾಗಿದೆ’ ಎಂದು ತಿಳಿಸಿದರು.
ಡಾ.ಕೇಶವರಾಜ್, ಸಿದ್ಧಗಂಗಾ ಆಸ್ಪತ್ರೆಯ ಡಾ.ಪರಮೇಶ್ವರ್, ಚಂದ್ರಶೇಖರ್, ಮಲ್ಲೇಶ್, ಬಸವರಾಜು, ಚಂದ್ರಣ್ಣ, ಬೆಳ್ಳಿ ಲೋಕೇಶ್, ಪ್ರಭು, ಬಸವರಾಜು, ರೋಟರಿ ಸಂಸ್ಥೆ ಈಸ್ಟ್ ಅಧ್ಯಕ್ಷ ಮಲ್ಲೇಶಯ್ಯ, ಎಸ್.ನಾಗಣ್ಣ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.