ADVERTISEMENT

ಲೋಕಾಯುಕ್ತ ಹೆಸರಲ್ಲಿ ಹಣಕ್ಕೆ ಬೇಡಿಕೆ

ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 5:57 IST
Last Updated 20 ಜನವರಿ 2026, 5:57 IST
ಕರ್ನಾಟಕ ಲೋಕಾಯುಕ್ತ
ಕರ್ನಾಟಕ ಲೋಕಾಯುಕ್ತ   

ತುಮಕೂರು: ಮಹಾನಗರ ಪಾಲಿಕೆ ಕಂದಾಯ ನಿರೀಕ್ಷಕ ಸಿ.ಎಚ್‌.ಶ್ರೀನಿವಾಸ್‌, ಪ್ರಥಮ ದರ್ಜೆ ಸಹಾಯಕ ಶಿವಕುಮಾರ್‌ ಅವರಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಡಲಾಗಿದೆ. ಈ ಬಗ್ಗೆ ತಿಲಕ್‌ ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾಟ್ಸ್‌ ಆ್ಯಪ್‌ ಕರೆ ಮಾಡಿದ ವ್ಯಕ್ತಿ ಲೋಕಾಯುಕ್ತ ಎಡಿಜಿಪಿ ಕಚೇರಿಯ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ ಎಂದು ಪರಿಚಯಿಸಿಕೊಂಡರು. ಸುಮಾರು 4 ನಿಮಿಷ 58 ಸೆಕೆಂಡ್‌ ಮಾತನಾಡಿದ್ದು, ಹಣಕ್ಕೆ ಬೇಡಿಕೆ ಇಟ್ಟರು’ ಎಂದು ಶ್ರೀನಿವಾಸ್‌ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಇದರ ಕಡತ ಈಗ ಎಡಿಜಿಪಿ ಕಚೇರಿಯಲ್ಲಿದೆ. ಅದರಲ್ಲಿ ‘ಬಿ’ ರಿಪೋರ್ಟ್‌ ಹಾಕಿಸಲು ₹1 ಲಕ್ಷ ಹಣ ನೀಡಬೇಕು ಎಂದು ಮಲ್ಲಿಕಾರ್ಜುನ ಎಂಬುವರು ಕೇಳಿದರು. ನಂತರ ಮತ್ತೊಬ್ಬರು ಎಡಿಜಿಪಿ ಎಂದು ಮಾತನಾಡಿ, ‘ಮಲ್ಲಿಕಾರ್ಜುನ ಹೇಳಿದಂತೆ ಕೇಳಿ, ಒಂದು ಗಂಟೆಯ ಒಳಗೆ ಹಣ ತಯಾರು ಮಾಡಿಕೊಳ್ಳಿ ಎಂದು ಗಡುವು ನೀಡಿದರು. ನಂತರ ಕರೆ ಕಟ್‌ ಮಾಡಿದರು’ ಎಂದು ಶ್ರೀನಿವಾಸ್‌ ಹೇಳಿದ್ದಾರೆ.

ADVERTISEMENT

ನಂತರ ಕಚೇರಿಗೆ ಬಂದು ವಿಚಾರಿಸಿದಾಗ ಶಿವಕುಮಾರ್‌ ಅವರಿಗೂ ಇದೇ ರೀತಿ ಕರೆ ಬಂದಿರುವುದು ತಿಳಿಯಿತು. ನಗರದ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ ಇದು ಬೆದರಿಕೆ ಕರೆ ಎಂಬುವುದು ಗೊತ್ತಾಯಿತು ಎಂದು ತಿಳಿಸಿದ್ದಾರೆ. ಬೆದರಿಕೆ ಹಾಕಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.