ಶಿರಾ: ನಗರಸಭೆ ಆರೋಗ್ಯ ನಿರೀಕ್ಷಕ ಮುಜಾಹಿದ್ ಮತ್ತು ಕುಟುಂಬದವರು ಹಜ್ ಯಾತ್ರೆಯಿಂದ ಹಿಂದಿರುಗಿದ್ದು, ಕೊರೊನಾ ಭೀತಿ ಹಿನ್ನೆಲೆಯಲ್ಲಿ 28 ದಿನ ಮನೆಯಿಂದ ಹೊರಬರದಂತೆ ವೈದ್ಯರು ಸೂಚನೆ ನೀಡಿದ್ದಾರೆ.
ಹಜ್ ಯಾತ್ರೆ ಅಂಗವಾಗಿ ಸೌದಿಯ ಉಮ್ರಾ ನಗರಕ್ಕೆ ಪತ್ನಿ, ಪುತ್ರಿ ಜೊತೆಯಲ್ಲಿ ತೆರಳಿದ್ದರು. ಯಾತ್ರೆ ಮುಗಿಸಿಕೊಂಡು ಶುಕ್ರವಾರ ಮುಂಬೈ ಮೂಲಕ ಶಿರಾಕ್ಕೆ ವಾಪಸ್ ಬಂದ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿ ಅವರನ್ನು ಕಳುಹಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ 28 ದಿನ ನಿಗಾಘಟಕದಲ್ಲಿ ಇರಿಸದೆ ಕಳುಹಿಸಿರುವ ವಿಷಯ ನಗರಸಭೆ ಮಾಜಿ ಸದಸ್ಯ ಆರ್.ರಾಮು ಮೂಲಕ ತಿಳಿದು ಶಿರಾ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀನಾಥ್ ಅವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬೇಡಿ. ನೆಗಡಿ, ಕೆಮ್ಮು, ಜ್ವರ ಬಂದರೆ ತಕ್ಷಣ ವೈದ್ಯರ ಗಮನಕ್ಕೆ ತರುವಂತೆ ಸೂಚನೆ ನೀಡಿದ್ದಾರೆ.
28 ದಿನ ಯಾವುದೇ ಸಮಸ್ಯೆ ಇಲ್ಲದಿದ್ದರೆ ಮಾಮೂಲಿನಂತೆ ಇರಬಹುದು ಯಾವುದೇ ಆತಂಕ ಪಡಬೇಡಿ. ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಮಸೀದಿಗಳಲ್ಲಿ ಸೂಚನೆ: ಶುಕ್ರವಾರ ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಶುಕ್ರವಾರ ಹಲವಾರು ಸೂಚನೆ ನೀಡಲಾಗಿದೆ. ಶಿರಾ ನಗರದಲ್ಲಿರುವ ಹಲವಾರು ಮುಸ್ಲಿಮರು ವಿದೇಶದಲ್ಲಿದ್ದು, ಅವರು ಈಗ ವಾಪಸ್ ಬಂದರೆ ಆರೋಗ್ಯ ಇಲಾಖೆ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.