ತುಮಕೂರು: ‘ಒಂದು ದೇಶ, ಒಂದು ಮಾರುಕಟ್ಟೆ’ ಘೋಷಣೆಯಡಿ ಜಾರಿಗೆ ತಂದಿರುವ ‘ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ, ‘ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ’ಯು ರೈತರಿಗೆ ಮರಣ ಶಾಸನಗಳಾಗಿವೆ. ರೈತರು ಬೀದಿ ಪಾಲಾಗುವರು ಎಂದು ಕೃಷಿ ಕಾರ್ಮಿಕರ ಸಂಘಟನೆಯ (ಆರ್ಕೆಎಸ್) ಜಿಲ್ಲಾ ಸಂಚಾಲಕ ಎಸ್.ಎನ್.ಸ್ವಾಮಿ ಆರೋಪಿಸಿದರು.
ರೈತ ವಿರೋಧಿ ಕಾಯ್ದೆಗಳ ವಿರುದ್ಧ ‘ಅಖಿಲ ಭಾರತ ಪ್ರತಿರೋಧ ದಿನ’ದ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಮಾತನಾಡಿದರು.
ಈ ನೀತಿಗಳನ್ನು ಜಾರಿಗೊಳಿಸುವ ಮುನ್ನ ರೈತ ಸಂಘಟನೆಗಳ ಜತೆ ಸರ್ಕಾರ ಸಮಾಲೋಚಿಸಬೇಕಿತ್ತು. ಸರ್ಕಾರವು ರಾಜ ಹೇಳಿದ್ದೇ ನೀತಿ ಎನ್ನುವ ಮಧ್ಯಯುಗದ ಮೌಲ್ಯದಲ್ಲೇ ಮುಳುಗಿದೆ. ಇದು ಬಹಳ ಅಪಾಯಕಾರಿ ಎಂದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ಲಾಭಗಳಿಸುತ್ತಾರೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಂಬಲಿಗರು ಪ್ರಚಾರ ಮಾಡುತ್ತಿದ್ದಾರೆ. ಆದರೆ ಈಗ ರಾಗಿಗೆ ಬೆಂಬಲ ಬೆಲೆ ₹ 3,150 ಇದ್ದರೂ ನೇರ ಖರೀದಿಯಲ್ಲಿ 1700-1900ಕ್ಕೆ ಮಾರಾಟ ಆಗುತ್ತಿದೆ. ಎಪಿಎಂಸಿಯ ಹಿಡಿತ ತಪ್ಪಿದರೆ ರೈತರು ಬೀದಿಪಾಲಾಗುತ್ತಾರೆ ಎಂದು ಹೇಳಿದರು.
ಜಿಲ್ಲಾ ಸಂಘಟಕ ಎನ್.ನವೀನ್ ಮಾತನಾಡಿದರು. ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಪ್ರಧಾನಮಂತ್ರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.