ತಿಪಟೂರು: ತಾಲ್ಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ನಡೆಯಿತು.
ಕೃಷಿಕ ಸಮಾಜದ ಅಧ್ಯಕ್ಷ ಎಂ.ಎಸ್. ಯೋಗೀಶ್ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ ಆಸ್ತಿ ಬೀದರ್ನ ಮೀನುಗಾರಿಕೆ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿದ್ದು, ಈ ಕೇಂದ್ರವನ್ನು ಕೊನೇಹಳ್ಳಿಯಲ್ಲಿ ಉಳಿಸಿಕೊಳ್ಳವ ಬಗ್ಗೆ ಶಾಸಕರು ಹಾಗೂ ಸಂಸದರಿಗೆ ಮನವಿ ಸಲ್ಲಿಸಬೇಕಿದೆ. ರಾಗಿ ಬೆಳೆದ ರೈತರು ನಾಫೆಡ್ ಕೇಂದ್ರಕ್ಕೆ ರಾಗಿ ನೀಡಿದ್ದು ತಿಂಗಳಗಟ್ಟಲೆ ಕಳೆದರೂ ಹಣ ಬಿಡುಗಡೆಯಾಗಿಲ್ಲ. ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕಿದೆ. ಕೃಷಿಕ ಸಮಾಜಕ್ಕೆ ಸ್ವಂತ ನಿವೇಶನದ ಅವಶ್ಯಕತೆಯಿರುವುದರಿಂದ ಎಪಿಎಂಸಿ ಆವರಣದಲ್ಲಿ ಸ್ಥಳ ನಿಗದಿ ಮಾಡಬೇಕಿದೆ ಎಂದು ಚರ್ಚಿಸಿದರು.
ಕೇಂದ್ರದ ಮುಖ್ಯಸ್ಥ ಗೋವಿಂದೇಗೌಡ ಮಾತನಾಡಿ, ತೆಂಗಿನ ಕಾಯಿ ಕೀಳುವ ತರಬೇತಿ ನೀಡಲಾಗುತ್ತಿದ್ದು, ರೈತರು ‘ಕೇರಾ ಸುರಕ್ಷಾ’ ವಿಮೆಯಲ್ಲಿ ಪ್ರತಿ ವರ್ಷ 235ರೂ ಕಂತು ಪಾವತಿಸಿಕೊಳ್ಳಬಹುದು ಎಂದು ತಿಳಿಸಿದರು.
ಸಭೆಗೆ ರೇಷ್ಮೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಗೈರಾಗಿದ್ದು, ಈ ಇಲಾಖೆಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಕೃಷಿಕ ಸಮಾಜದ ಉಪಾಧ್ಯಕ್ಷ ಮೋಹನ್ಕುಮಾರ್, ಜಿಲ್ಲಾ ಪ್ರತಿನಿಧಿ ನಟರಾಜು, ಖಜಾಂಜಿ ವಿಜಯಕುಮಾರ್, ಸದಸ್ಯರಾದ ಸಂಗಮೇಶ, ವಿಶ್ವೇಶ್ವರಯ್ಯ, ಬಸವರಾಜು ದೇವರಾಜು, ಮುದ್ದಲಿಂಗರಾಜು, ಶಂಕರಮೂರ್ತಿ, ಗಂಗಾಧರ್, ರಾಜಶೇಖರ್, ಯೋಗನಂದಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ಪವನ್, ಎಪಿಎಂಸಿ ಸಹಾಯಕ ಕಾರ್ಯದರ್ಶಿ ಹನಮಂತರಾಜು, ಪಶು ಸಂಗೋಪನೆ ಇಲಾಖೆಯ ಭಾನುಪ್ರಕಾಶ, ಹಿರಿಯ ತೋಟಗಾರಿಕೆ ನಿರ್ದೇಶಕ ಚಂದ್ರಶೇಖರ್, ಆತ್ಮ ಯೋಜನೆ ಮಹೇಶಕುಮಾರ ನೀಲಗಾರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.