ADVERTISEMENT

ತುಮಕೂರು: ಜನಪ್ರತಿನಿಧಿಗಳಿಗೆ ಸನ್ಮಾನ ನಾಳೆ

ಜಿಲ್ಲಾ ಸಹಕಾರ ಸಂಘಗಳ‌ ಒಕ್ಕೂಟದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 14:44 IST
Last Updated 18 ಆಗಸ್ಟ್ 2023, 14:44 IST

ತುಮಕೂರು: ಜಿಲ್ಲಾ ಸಹಕಾರ ಸಂಘಗಳ‌ ಒಕ್ಕೂಟದಿಂದ ಜಿಲ್ಲೆಯ ನೂತನ ಸಚಿವರು ಮತ್ತು ಶಾಸಕರ ಅಭಿನಂದನಾ ಸಮಾರಂಭವನ್ನು ಆ. 20ರಂದು ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ 11 ಜನ ನೂತನ ಶಾಸಕರನ್ನು ಸನ್ಮಾನಿಸಲಾಗುತ್ತದೆ. ಸಂಸದರಾದ ಜಿ.ಎಸ್‌.ಬಸವರಾಜು, ಡಿ.ಕೆ.ಸುರೇಶ್, ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಅವರನ್ನೂ ಗೌರವಿಸಲಾಗುತ್ತದೆ. ಸುಮಾರು 15 ಸಾವಿರ ಜನ ಸೇರಬಹುದು ಎಂಬ ನಿರೀಕ್ಷೆ ಇದೆ ಎಂದು ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಜಿಲ್ಲಾ ಸಹಕಾರಿಗಳ ಅಭಿನಂದನಾ ಸಮಿತಿ ಅಧ್ಯಕ್ಷ ಎನ್.ಎಸ್.ಜಯಕುಮಾರ್‌ ಇಲ್ಲಿ ಶುಕ್ರವಾರ ಹೇಳಿದರು.

ಸಚಿವ ಜಿ.ಪರಮೇಶ್ವರ ಶಿಕ್ಷಣ ಸಂಸ್ಥೆಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕೆ.ಎನ್.ರಾಜಣ್ಣ ಕೆಳ ಮಟ್ಟದಿಂದ ಬೆಳೆದು ಬಂದಿದ್ದಾರೆ. ಸಹಕಾರ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರಿಗೆ ಸಹಕಾರ ಕ್ಷೇತ್ರವನ್ನು ಸದೃಢಗೊಳಿಸಬೇಕು ಎಂಬ ಅಪೇಕ್ಷೆ ಇದೆ. ಅವರ ಅನುಭವ, ಮಾರ್ಗದರ್ಶನದಲ್ಲಿ ಸಾಗುತ್ತಾ, ಮತ್ತಷ್ಟು ಉತ್ತಮ ಕೆಲಸಗಳು ಮಾಡಬೇಕು. ಹಳ್ಳಿಗಳಲ್ಲಿ ಸಹಕಾರ ಸಂಘಗಳ ಮುಖಾಂತರ ಜನರಿಗೆ ನೆರವಾಗಬೇಕು ಎಂಬ ಉದ್ದೇಶವಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಸಹಕಾರ ಕ್ಷೇತ್ರದ ಹಲವು ಸಮಸ್ಯೆಗಳನ್ನು ಸಮಾರಂಭದ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು. ಸಹಕಾರ ಕ್ಷೇತ್ರದ ಪ್ರಕರಣಗಳ ವಿಲೇವಾರಿಗೆ ತ್ವರಿತ ವಿಲೇವಾರಿ ನ್ಯಾಯಾಲಯ ಮಾಡಬೇಕು ಎಂದು ಒತ್ತಾಯ ಮಾಡಲಾಗುವುದು. ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಮೇವು, ಕುಡಿಯುವ ನೀರಿನ ಪೂರೈಕೆ ಕ್ರಮಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಮುಖಂಡರಾದ ಜಿ.ಜೆ.ರಾಜಣ್ಣ, ನಾಗೇಶ್‌, ಕಲ್ಲಹಳ್ಳಿ ದೇವರಾಜು, ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.