ADVERTISEMENT

ಚೌಡೇಶ್ವರಿದೇವಿ ಮುಳ್ಳುಗದ್ದಿಗೆ ಉತ್ಸವ

ಜಗತ್ತಿನ ಸೃಷ್ಟಿಗೆ ಭಗವಂತನೇ ಕಾರಣ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 15:29 IST
Last Updated 8 ಅಕ್ಟೋಬರ್ 2019, 15:29 IST
ತಿಪಟೂರು ತಾಲ್ಲೂಕಿನ ದಸರೀಘಟ್ಟದ ಮುಳ್ಳುಗದ್ದಿಗೆ ಉತ್ಸವದಲ್ಲಿ ಮುಳ್ಳಿನ ರಾಶಿ ಮೇಲೆ ಚೌಡೇಶ್ವರಿದೇವಿ ಮೂರ್ತಿಯನ್ನು ಭಕ್ತರು ಹೊತ್ತುಕೊಂಡು ಹೋದರು
ತಿಪಟೂರು ತಾಲ್ಲೂಕಿನ ದಸರೀಘಟ್ಟದ ಮುಳ್ಳುಗದ್ದಿಗೆ ಉತ್ಸವದಲ್ಲಿ ಮುಳ್ಳಿನ ರಾಶಿ ಮೇಲೆ ಚೌಡೇಶ್ವರಿದೇವಿ ಮೂರ್ತಿಯನ್ನು ಭಕ್ತರು ಹೊತ್ತುಕೊಂಡು ಹೋದರು   

ತಿಪಟೂರು: ನಾಡಿನ ಶಕ್ತಿದೇವತೆಗಳಲ್ಲಿ ಒಂದಾದ ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠದ ಚೌಡೇಶ್ವರಿ ದೇವಿಯ ಮುಳ್ಳುಗದ್ದಿಗೆ ಉತ್ಸವ ಆಳೆತ್ತರದ ಗಟ್ಟಿಕಾರೆಮುಳ್ಳಿನ ರಾಶಿಯ ಮೇಲೆ ವಿಜಯದಶಮಿಯಂದು ಅತ್ಯಂತ ವೈಭವ ಮತ್ತು ಭಕ್ತಿ ಪರಾಕಾಷ್ಠೆಯಿಂದ ನಡೆಯಿತು.

ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಮನುಷ್ಯನಲ್ಲಿ ಕಷ್ಟಕಾರ್ಪಣ್ಯಗಳು ದೂರವಾಗಲು ಭಗವಂತನ ನಾಮಸ್ಮರಣೆ ಅತಿಮುಖ್ಯವಾಗಿದೆ. ಜಗತ್ತಿನ ಸೃಷ್ಟಿಗೆ ಭಗವಂತನೇ ನೇರ ಕಾರಣ. ಮುಳ್ಳುಗಳು ಕಷ್ಟದ ಪ್ರತೀಕ. ಅದನ್ನು ಮೆಟ್ಟಿ ನಿಲ್ಲುವಂತ ಶಕ್ತಿ ನೀಡುವವಳೇ ಚೌಡೇಶ್ವರಿದೇವಿ ಎಂದು ಹೇಳಿದರು.

ಮುಳ್ಳುಗಳಂತ ಕಷ್ಟಗಳ ಮೇಲೆ ನಡೆಯುವಾಗ ಆಕೆಯ ಸ್ಮರಣೆ ಮಾಡಿದರೆ ಕಷ್ಟಗಳು ಮಂಜಿನಂತೆ ಕರಗುತ್ತವೆ. ಸಂಸಾರದಲ್ಲಿ ಸಹ ಕಷ್ಟಗಳು ನಿವಾರಣೆಯಾಗಲು ದೈವೀಭಕ್ತಿ ಅಗತ್ಯ. ಸುಖ ಹಾಗೂ ದುಃಖಗಳು ಬಂದಾಗ ದೇವರ ಸ್ಮರಣೆ ಮಾಡಬೇಕು ಎಂದು ಹೇಳಿದರು.

ADVERTISEMENT

ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ, ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲು ದೇವರ ಕೃಪೆ ಅಗತ್ಯ. ಆಧುನಿಕತೆ ಎಷ್ಟೇ ಮುಂದುವರಿದರೂ ದೈವೀ ಪ್ರಾರ್ಥನೆಯಿಂದ ನೆಮ್ಮದಿ ಪಡೆಯಬಹುದು ಎಂದರು.

ಶಾಸಕ ಬಿ.ಸಿ.ನಾಗೇಶ್ ಮಾತನಾಡಿದರು.

ಆದಿಚುಂಚನಗಿರಿ ಕ್ಷೇತ್ರದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ದಸರೀಘಟ್ಟ ಶಾಖಾಮಠದ ಚಂದ್ರಶೇಖರನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾಮಠದ ಚೈತನ್ಯನಾಥ ಸ್ವಾಮೀಜಿ, ಮಂಗಳೂರಿನ ಧರ್ಮಪಾಲನಾಥ ಸ್ವಾಮೀಜಿ, ಮಠದ ಟ್ರಸ್ಟಿಗಳಾದ ರಾಮಕೃಷ್ಣಪ್ಪ, ಜಿತೇಂದ್ರ, ಸಿದ್ದಪ್ಪ, ಬಾಲಕೃಷ್ಣ, ಶಿವಸ್ವಾಮಿ, ಚಂದ್ರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.