ADVERTISEMENT

ಲಿಂಕ್‌ ಕೆನಾಲ್‌ ಪ್ರತಿಭಟನೆ: ಮೂವರು ಶಾಸಕರು, ಮಠಾಧೀಶರ ವಿರುದ್ಧ ಎಫ್‌ಐಆರ್‌

ನಿಷೇಧಾಜ್ಞೆ ಉಲ್ಲಂಘನೆ, ಸರ್ಕಾರಿ ಆಸ್ತಿಗೆ ಹಾನಿ; ನೂರಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 15:49 IST
Last Updated 1 ಜೂನ್ 2025, 15:49 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಗುಬ್ಬಿ (ತುಮಕೂರು): ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿ ವಿರೋಧಿಸಿ ಶನಿವಾರ ತಾಲ್ಲೂಕಿನ ಸಂಕಾಪುರದ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮತ್ತು ಜೆಡಿಎಸ್‌ನ ಮೂವರು ಶಾಸಕರು ಮತ್ತು ಮಾಠಾಧೀಶರು ಸೇರಿದಂತೆ ನೂರಕ್ಕೂ ಹೆಚ್ಚು ಜನರ ವಿರುದ್ಧ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಠಾಧೀಶರು, ಶಾಸಕರಾದ ಬಿ.ಸುರೇಶ್‌ಗೌಡ, ಎಂ.ಟಿ.ಕೃಷ್ಣಪ್ಪ, ಜಿ.ಬಿ.ಜ್ಯೋತಿಗಣೇಶ್‌, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಮುಖಂಡ ಎಸ್‌.ಡಿ.ದಿಲೀಪ್‌ಕುಮಾರ್‌, ಎ.ಗೋವಿಂದರಾಜು, ಎಚ್.ಎಸ್.ರವಿಶಂಕರ್‌ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಮಠಾಧೀಶರ ಹೆಸರು ಉಲ್ಲೇಖಿಸಿಲ್ಲ.

ಶನಿವಾರ ಪ್ರತಿಭಟನೆಗೆ ಸಾವಿರಾರು ಜನ ಸೇರುವ ಮಾಹಿತಿ ಪಡೆದ ತಾಲ್ಲೂಕು ಆಡಳಿತ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಲಿಂಕ್‌ ಕೆನಾಲ್‌ ಕಾಮಗಾರಿ ನಡೆಯುತ್ತಿರುವ ಸಂಕಾಪುರದ 10 ಕಿಲೊ ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ಹೋರಾಟಕ್ಕೆ ಅವಕಾಶ ನೀಡಿರಲಿಲ್ಲ. ಸಾವಿರಾರು ಪ್ರತಿಭಟನಕಾರರು ನಿಷೇಧಾಜ್ಞೆ ಧಿಕ್ಕರಿಸಿ ಕಾಮಗಾರಿ ಸ್ಥಳಕ್ಕೆ ನುಗ್ಗಿದ್ದರು.

ADVERTISEMENT

ನಿಷೇಧಾಜ್ಞೆ ಉಲ್ಲಂಘನೆ, ಕೊಲೆ ಯತ್ನ, ಸರ್ಕಾರಿ ಆಸ್ತಿಪಾಸ್ತಿಗೆ ಹಾನಿ, ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಏಕಾಏಕಿ ಕಾಮಗಾರಿ ಜಾಗಕ್ಕೆ ನುಗ್ಗಿ, ಆಸ್ತಿಪಾಸ್ತಿಗೆ ಹಾನಿ ಮಾಡಿರುವುದು. ಬೃಹತ್‌ ನಿರ್ಮಾಣ ವಾಹನಗಳ ಮೇಲೆ ಕಲ್ಲು ತೂರಾಟ ಮತ್ತು  ಚಲಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರತಿಭಟನಕಾರರು ಬೃಹತ್‌ ಗಾತ್ರದ ಪೈಪ್‌ಗಳನ್ನು ಗುಂಡಿಗಳಿಗೆ ತಳ್ಳಿ, ಬಸ್‌ಗಳ ಗಾಜು ಒಡೆದು, ಚಕ್ರಗಳ ಗಾಳಿ ತೆಗೆದು ಚಾಲಕರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಕಾಮಗಾರಿ ಸ್ಥಳಕ್ಕೆ ಹೋಗದಂತೆ ಅಳವಡಿಸಿದ್ದ ಬ್ಯಾರಿಕೇಡ್‌ ಮುರಿದು, ಪೊಲೀಸರ ಜತೆಗೆ ವಾಗ್ವಾದ ನಡೆಸಿದ್ದಾರೆ. ಹೆದ್ದಾರಿಯಲ್ಲಿ ಮಣ್ಣು ಸುರಿದು, ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಪ್ರತ್ಯೇಕವಾಗಿ 13 ಪ್ರಕರಣ  ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.