ತುಮಕೂರು: ಶಿವರಾತ್ರಿ ಹಬ್ಬ ಮುಗಿಯುತ್ತಿದ್ದಂತೆ ಧಾನ್ಯ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದ್ದರೆ, ಜೂಸ್ಗೆ ಬಳಸುವ ಹಣ್ಣುಗಳ ಬೆಲೆ ದುಬಾರಿಯಾಗಿದೆ. ಕೋಳಿ, ಮೀನಿನ ಬೆಲೆಯೂ ಹೆಚ್ಚಳವಾಗಿದೆ. ಈ ವಾರ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.
ದಿನದಿಂದ ದಿನಕ್ಕೆ ತಾಪಮಾನ ತೀವ್ರವಾಗುತ್ತಿದ್ದು, ಜೂಸ್ಗೆ ಬಳಸುವ ಹಣ್ಣುಗಳ ಧಾರಣೆ ಗಗನದತ್ತ ಮುಖ ಮಾಡಿದೆ. ಕಿತ್ತಳೆ, ಮೂಸಂಬಿ, ಪಪ್ಪಾಯ ಧಾರಣೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಕಿತ್ತಳೆ ಹಣ್ಣು ಕೆ.ಜಿ ₹100, ಮೂಸಂಬಿ ₹80ರತ್ತ ದಾಪುಗಾಲು ಹಾಕಿವೆ. ದಾಳಿಂಬೆ ಹಣ್ಣು ಸೇಬಿಗಿಂತ ದುಬಾರಿಯಾಗಿದೆ.
ತೊಗರಿ ಬೇಳೆ ಕೆ.ಜಿ.ಗೆ ₹5,ಹುರಿಗಡಲೆ ₹10 ಕಡಿಮೆಯಾಗಿದ್ದರೆ, ಕಡಲೆ ಬೇಳೆ ₹5 ಏರಿಕೆಯಾಗಿದೆ. ಅಡುಗೆ ಎಣ್ಣೆ ಧಾರಣೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಮತ್ತೆ ಏರಿಕೆಯಾಗಿದ್ದು, ಸನ್ಫ್ಲವರ್ ಕೆ.ಜಿ ₹145– ₹150ಕ್ಕೆ, ಫಾಮಾಯಿಲ್ ಕೆ.ಜಿ ₹125ಕ್ಕೆ ಜಿಗಿದಿದೆ.
ತರಕಾರಿ ಬೆಲೆ ಬಹುತೇಕ ಸ್ಥಿರವಾಗಿದ್ದು, ಕೆಲವು ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಬೀನ್ಸ್ ಕೆ.ಜಿ.ಗೆ ₹10, ಬೆಂಡೆಕಾಯಿ ಬೆಲೆ ₹10 ಕಡಿಮೆಯಾಗಿದೆ. ಈರುಳ್ಳಿ ಧಾರಣೆ ಇಳಿಕೆಯತ್ತ ಸಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈರುಳ್ಳಿ ಬೆಲೆ ತೀವ್ರವಾಗಿ ಕುಸಿದಿದ್ದರೂ, ಸ್ಥಳೀಯ ಮಾರುಕಟ್ಟೆಯಲ್ಲಿ ಅದರ ಪರಿಣಾಮ ಕಂಡುಬಂದಿಲ್ಲ.
ಕೋಳಿ ಮತ್ತೂ ದುಬಾರಿ: ಕಳೆದ ಕೆಲ ವಾರಗಳಿಂದ ಕೋಳಿ ಬೆಲೆ ಏರಿಕೆ ಮುಂದುವರಿದಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ.ಗೆ ₹10 ದುಬಾರಿಯಾಗಿದೆ. ಈಗ ಬ್ರಾಯ್ಲರ್ ಕೋಳಿ ಕೆ.ಜಿ ₹160, ರೆಡಿ ಚಿಕನ್ ಕೆ.ಜಿ ₹230ಕ್ಕೆ ಹಾಗೂ ಮೊಟ್ಟೆಕೋಳಿ ಕೆ.ಜಿ ₹110ಕ್ಕೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ.
ಮೀನಿನ ಬೆಲೆಯೂ ಏರಿಕೆ: ಮೀನಿನ ಬೆಲೆಯೂ ಏರಿಕೆಯತ್ತಲೇ ಹೆಜ್ಜೆ ಹಾಕಿದೆ. ಮಾರುಕಟ್ಟೆಗೆ ಮೀನು ಬರುವುದು ಕಡಿಮೆಯಾಗಿದ್ದು, ಬೆಲೆ ದುಬಾರಿಯಾಗಿದೆ. ಬೂತಾಯಿ ಮೀನು ಮಾರುಕಟ್ಟೆಗೆ ಬಂದಿಲ್ಲ.
ಬಂಗುಡೆ ಕೆ.ಜಿ ₹290, ಬೊಳಿಂಜರ್ ₹260, ಅಂಜಲ್ ₹880, ಬಿಳಿಮಾಂಜಿ ₹850, ಸೀಗಡಿ ಕೆ.ಜಿ ₹510ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.