ಹುಳಿಯಾರು: ಗೌರಿ- ಗಣೇಶನ ಹಬ್ಬಕ್ಕೆ ಸಾಮಗ್ರಿ ಖರೀದಿಸಲು ಪಟ್ಟಣದಲ್ಲಿ ಶುಕ್ರವಾರ ಜನಸಂದಣಿ ಸೇರಿದ್ದು, ಗಣೇಶ ಮೂರ್ತಿಗಳ ವ್ಯಾಪಾರ ಜೋರಾಗಿತ್ತು.
ಹಣ್ಣು, ಹೂವು, ಸೌತೆಕಾಯಿ, ಬಾಗಿನದ ಸಾಮಗ್ರಿ ಖರೀದಿಸಿದರು. ಎಲ್ಲೆಡೆ ದ್ವಿಚಕ್ರ ವಾಹನಗಳ ಸಾಲು ನಿಂತಿತ್ತು. ಗುರುವಾರ ಸಂತೆ ದಿನವಾಗಿದ್ದು ಶುಕ್ರವಾರವೂ ಸಂತೆ ಚಿತ್ರಣ ಕಂಡುಬಂತು. ಉಳಿದಂತೆ ಜವಳಿ ಹಾಗೂ ಸಿದ್ಧ ಉಡುಪುಗಳ ಅಂಗಡಿಯಲ್ಲಿಯೂ ಜನರು ತುಂಬಿದ್ದರು.
ಗಣೇಶನ ಮೂರ್ತಿಗೆ ಬೇಡಿಕೆ: ಗಣೇಶ ಮೂರ್ತಿಗಳನ್ನು ಪಟ್ಟಣದ ಬಸ್ನಿಲ್ದಾಣ, ರಂಗನಾಥ ಸ್ವಾಮಿ ದೇಗುಲದ ಮುಂಭಾಗ, ಎಣ್ಣೆ ಗಾಣದ ಆವರಣ, ತಿಪಟೂರು ರಸ್ತೆಯಲ್ಲಿ ಸಾಕಷ್ಟು ಕಡೆ ಮಾರಾಟಕ್ಕೆ ಇಡಲಾಗಿತ್ತು. ಚಿಕ್ಕ ಗಣಪತಿಯಿಂದ ಹಿಡಿದು ಮಧ್ಯಮ ಗಾತ್ರ ಹಾಗೂ 6 ಅಡಿ ಎತ್ತರದವರೆಗಿನ ಸುಂದರ ಗಣೇಶನ ಮೂರ್ತಿಗಳು ಮಾರಾಟಕ್ಕೆ ಇದ್ದವು.
ಗಣೇಶ ಪ್ರತಿಷ್ಠಾಪನೆಗೆ ಸರ್ಕಾರದ ಮಾರ್ಗಸೂಚಿಗಳಿದ್ದು ಪೊಲೀಸ್, ಬೆಸ್ಕಾಂ ಸೇರಿದಂತೆ ಇತರ ಇಲಾಖೆಗಳ ಅನುಮತಿ ಪಡೆಯಬೇಕು ಎಂಬ ನಿಯಮದ ನಡುವೆಯೂ ಗ್ರಾಮಗಳಿಂದ ಯುವಕರ ಗುಂಪು ತಂಡೋಪತಂಡವಾಗಿ ಬಂದು ಮೂರ್ತಿಗಳನ್ನು ಖರೀದಿಸಿದರು.
ಯಾವುದೇ ಸಮಸ್ಯೆ ಇಲ್ಲದೆ ಹೋದರೂ ವ್ಯಾಪಾರ ಸ್ವಲ್ಪ ಕಷ್ಟವಾಗಿದೆ. ಗಣೇಶ ಮೂರ್ತಿಗಳ ತಯಾರಿಕೆ ಕೂಲಿ, ಬಣ್ಣ ಸೇರಿದಂತೆ ಇತರೆ ಖರ್ಚುಗಳು ಹೆಚ್ಚು ತಗುಲುತ್ತದೆ. ಆದರೆ ಜನರು ಕಡಿಮೆ ಬೆಲೆಗೆ ಕೇಳುತ್ತಾರೆ. ವಿಧಿಯಲ್ಲದೆ ಕೊಡಲೇಬೇಕು ಎಂದು ಗಣೇಶಮೂರ್ತಿಗಳ ವ್ಯಾಪಾರಿ ಸೋರಲಮಾವು ಪ್ರವೀಣ್ ತಿಳಿಸಿದರು.
‘ಗಣೇಶ ಮೂರ್ತಿಗಳು ಈ ಬಾರಿ ಬೆಲೆ ಹೆಚ್ಚಾಗಿದ್ದು ನಾಲ್ಕು ಅಡಿ ಎತ್ತರದ ಗಣೇಶ ಮೂರ್ತಿಯನ್ನು ₹5 ಸಾವಿರಕ್ಕೆ ಕೊಂಡಿದ್ದೇವೆ’ ಎಂದು ಮರಾಠಿ ಪಾಳ್ಯದ ಯುವಕರು ಪ್ರತಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.