
ತಿಪಟೂರು: ನಗರದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಆಗಸ್ಟ್ 27ರ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ 96ನೇ ವರ್ಷದ ಸತ್ಯಗಣಪತಿ ವಿಸರ್ಜನಾ ಮಹೋತ್ಸವ ಮತ್ತು ಕಲ್ಪತರು ನಾಡಹಬ್ಬ ನವೆಂಬರ್ 22 ಹಾಗೂ 23ರಂದು ನಡೆಯಲಿದೆ.
ಗಣಪತಿ ವಿಸರ್ಜನಾ ಮಹೋತ್ಸವ ಎರಡು ದಿನ ನಡೆಯಲಿದೆ. ಶನಿವಾರ ರಾತ್ರಿ ಪ್ರಾರಂಭವಾಗಿ ಭಾನುವಾರ ತಡರಾತ್ರಿವೆರೆಗೆ ನಡೆಯುವ ಗಣೇಶೋತ್ಸವದಲ್ಲಿ ಕೋಲಾಟ, ವೀರಗಾಸೆ, ಚಂಡೆ, ಕೀಲು ಕುದುರೆ, ಕುದುರೆ ಸವಾರಿ, ಡೊಳ್ಳು ಕುಣಿತ, ನಾದಸ್ವರ, ಡಿ.ಜೆ. ಹಾಗೂ ಸಿಡಿಮದ್ದಿನ ನಡುವೆ ನಗರದ ಅಮಾನಿಕೆರೆಯಲ್ಲಿ ಭಾನುವಾರ ವಿಸರ್ಜನೆ ನಡೆಯಲಿದೆ.
ಈಗಾಗಲೇ ನಗರದೆಲ್ಲೆಡೆ ದೀಪಾಲಂಕಾರ, ಕೇಸರಿ ಧ್ವಜ, ಗೋಡೆ ಅಲಂಕಾರ, ಭಿತ್ತಿಚಿತ್ರಗಳು ಜೊತೆಗೆ ಈ ಬಾರಿ 55 ಅಡಿ ಎತ್ತರ, 22 ಅಡಿ ಅಗಲದ ಬೃಹತ್ ಹನುಮ ಮಹಾದ್ವಾರ ಎಲ್ಲರ ಗಮನ ಸೆಳೆದಿದೆ.
6.5 ಅಡಿ ಎತ್ತರದ ಆಕರ್ಷಣೆಯಿಂದ ಕೂಡಿರುವ 50 ವರ್ಷದಿಂದ ಮೂರ್ತಿ ಆಕಾರ ಬದಲಾಗದೆ ತಯಾರು ಮಾಡುತ್ತಿರುವ ಕೊಪ್ಪ ಗ್ರಾಮದ ಕುಂಬಾರ ಸಮಾಜದ ನಂಜಪ್ಪ ಶೆಟ್ಟರಿಂದ ಗಣೇಶ ಮೂರ್ತಿ ತಯಾರಿಕೆ ಆರಂಭಗೊಂಡು, ಯೋಗಾನಂದ್ ನಂತರ ಅವರ ಪುತ್ರ ಲಕ್ಷ್ಮೀಶ (ಚೇತನ್) 15 ದಿನ ನಿರಂತರ ವೃತಾಚರಣೆಯೊಂದಿಗೆ ಮೂರ್ತಿ ತಯಾರು ಮಾಡುತ್ತಾ ಬಂದಿದ್ದಾರೆ.
ಮೆರವಣಿಗೆ ಸಾಗುವ ಪ್ರತಿ ಹಂತದಲ್ಲೂ ಭಕ್ತರು ಹೂವು, ಹಣ್ಣು, ಮತ್ತು ಕರಿದ ಪದಾರ್ಥಗಳಿಂದ ಮಾಡಿದ ಭಾರಿ ಗಾತ್ರದ ಹಾರಗಳನ್ನು ಗಣೇಶ ಮೂರ್ತಿಗೆ ಅರ್ಪಿಸುತ್ತಾರೆ. ನಗರದ ಪ್ರತಿ ಅಂಗಡಿ ಮುಗ್ಗಟ್ಟು ಮುಂದೆ ಅನ್ನ ಪ್ರಸಾದ, ತೆಂಗಿನ ಕಾಯಿ ಈಡುಗಾಯಿ, ರಸ್ತೆ ಮೇಲೆ ಬಣ್ಣ ಬಣ್ಣದ ರಂಗೋಲಿಗಳು ಮೂಡಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.