ಹುಳಿಯಾರು: ಗೌರಿ- ಗಣೇಶನ ಹಬ್ಬಕ್ಕೆ ಪಟ್ಟಣದಲ್ಲಿ ಸೋಮವಾರ ಭಾರಿ ಜನಸಂದಣಿ ಸೇರಿದ್ದು ಗಣೇಶ ಮೂರ್ತಿಗಳ ವ್ಯಾಪಾರ ಜೋರಾಗಿತ್ತು.
ಪ್ರತಿ ಗುರುವಾರ ಸಂತೆಯಿದ್ದು ಹಬ್ಬದ ನಿಮಿತ್ತ ಸೋಮವಾರ ಸಂತೆ ಏರ್ಪಡಿಸಲಾಗಿತ್ತು. ಹಣ್ಣು, ಹೂವು, ಸೌತೆಕಾಯಿ, ಬಾಗಿನದ ಸಾಮಾನು ಕೊಳ್ಳಲು ಜನರು ವ್ಯಾಪಾರದಲ್ಲಿ ತೊಡಗಿದ್ದರು. ಎಲ್ಲೆಲ್ಲಿ ನೋಡಿದರೂ ದ್ವಿಚಕ್ರ ವಾಹನದ ಸಾಲು ಸಾಲು ಕಾಣುತ್ತಿತ್ತು. ಹೂ ಹಾಗೂ ಹಣ್ಣಿನ ಬೆಲೆ ಗಗನಕ್ಕೆರಿದ್ದರೂ ಜನರು ಕೊಳ್ಳಲು ಮುಗಿ ಬಿದ್ದಿದ್ದರು.
ಗಣೇಶನ ವಿಗ್ರಹಕ್ಕೂ ಬೇಡಿಕೆ: ಗಣೇಶ ಮೂರ್ತಿಗಳನ್ನು ಪಟ್ಟಣದ ಬಸ್ನಿಲ್ದಾಣ, ರಂಗನಾಥ ದೇಗುಲದ ಮುಂಭಾಗ, ಎಣ್ಣೆ ಗಾಣದ ಆವರಣ, ತಿಪಟೂರು ರಸ್ತೆಯಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಚಿಕ್ಕ ಗಣಪತಿಯಿಂದ ಹಿಡಿದು ಮಧ್ಯಮ ಗಾತ್ರ ಹಾಗೂ 6 ಅಡಿ ಎತ್ತರದವರೆಗಿನ ಗಣೇಶನ ಮೂರ್ತಿಗಳು ಮಾರಾಟಕ್ಕೆ ಇದ್ದವು.
ಯುವಕರ ಗುಂಪು ತಂಡೋಪತಂಡವಾಗಿ ಬಂದು ಮೂರ್ತಿಗಳನ್ನು ಕೊಳ್ಳುತ್ತಿದ್ದರು. ಗಣೇಶ ಮೂರ್ತಿಗಳ ತಯಾರಿಕೆ ಕೂಲಿ, ಬಣ್ಣ ಸೇರಿದಂತೆ ಇತರೆ ಖರ್ಚುಗಳು ಹೆಚ್ಚು ತಗುಲುತ್ತದೆ. ಆದರೆ ಜನರು ಬಹಳ ಕಡಿಮೆ ಬೆಲೆಗೆ ಕೇಳುತ್ತಾರೆ ವಿಧಿಯಲ್ಲದೆ ಕೊಡಲೇಬೇಕು ಎಂದು ಮೂರ್ತಿ ವ್ಯಾಪಾರಿ ಸೋರಲಮಾವು ಪ್ರವೀಣ್ ತಿಳಿಸಿದರು.
ಗಣೇಶ ಮೂರ್ತಿಗಳ ಬೆಲೆ ಹೆಚ್ಚಾಗಿದ್ದು ಸುಮಾರು 4 ಅಡಿ ಎತ್ತರದ ಗಣೇಶ ಮೂರ್ತಿಯನ್ನು ₹5 ಸಾವಿರಕ್ಕೆ ಕೊಂಡಿದ್ದೇವೆ ಎಂದು ಕೆಂಕೆರೆ ಗ್ರಾಮದ ಯುವಕರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.