ತುಮಕೂರು: ರಾಜ್ಯದಲ್ಲಿ ಮಾಹಿತಿ ಹಕ್ಕು ತಜ್ಞರೆಂದು ಪ್ರಖ್ಯಾತಿ ಗಳಿಸಿರುವ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಜೆ.ಎಂ.ರಾಜಶೇಖರ್ ಅವರನ್ನು ಮಾಹಿತಿ ಆಯೋಗದ ಆಯುಕ್ತರನ್ನಾಗಿ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಸಾಹಿತ್ಯ, ಸಂಘಟನೆ ಸೇರಿದಂತೆ ಹಲವು ರಂಗಗಳಲ್ಲಿ ಸೇವೆ ಸಲ್ಲಿಸಿರುವ ಜೆ.ಎಂ.ರಾಜಶೇಖರ್ ಅವರು ಇದುವರೆಗೂ 68ಕ್ಕೂ ಹೆಚ್ಚು ಮಾಹಿತಿ ಹಕ್ಕುಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಈ ಮೂಲಕ ಜನಸಾಮಾನ್ಯರಿಗೆ ಮಾಹಿತಿ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲು ನೆರವಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದೆ.
ಅವರ ಸೇವೆಯನ್ನು ಗುರುತಿಸಿ 500ಕ್ಕೂ ಹೆಚ್ಚು ಸಂಘ, ಸಂಸ್ಥೆಗಳು ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸಿವೆ. ಸಾಹಿತ್ಯ ಸೇವೆಯಲ್ಲಿ ಅನುಪಮ ಕೊಡುಗೆಯಿಂದಾಗಿ ತಾಲ್ಲೂಕು, ಜಿಲ್ಲಾ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವ ಕನ್ನಡ ಸಮ್ಮೇಳನದಲ್ಲಿ ಅವರು ಉಪನ್ಯಾಸವನ್ನು ನೀಡಿದ್ದಾರೆ ಎಂದು ತಿಳಿಸಿದೆ.
ಜೆ.ಎಂ.ರಾಜಶೇಖರ್ ಅವರಿಗೆ ಇರುವ ಮಾಹಿತಿ ಹಕ್ಕು ಪ್ರೌಢಿಮೆಯಿಂದಾಗಿಯೇ ರಾಜ್ಯ ಸರ್ಕಾರಿ ನೌಕರರಿಗೆ ಇವರಿಂದಲೇ ಮಾಹಿತಿ ಹಕ್ಕು ಉಪನ್ಯಾಸವನ್ನು ನೀಡಿಸಲಾಗುತ್ತಿದೆ. ಪ್ರಾಮಾಣಿಕ ವ್ಯಕ್ತಿಯಾಗಿರುವ ಜೆ.ಎಂ.ರಾಜಶೇಖರ್ ಅವರನ್ನು ಮಾಹಿತಿ ಆಯೋಗ ಆಯುಕ್ತರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಪಿ.ಎನ್.ರಾಮಯ್ಯ, ಹಬ್ಬತ್ತನಹಳ್ಳಿ ಶ್ರೀನಿವಾಸ್, ಎಚ್.ಬಿ.ರಾಜೇಶ್, ಗೂಳಹರಿವೆ ನಾಗರಾಜ್, ಪೂಜಾ ಹನುಮಯ್ಯ, ಸಿದ್ದಯ್ಯ ಸೇರಿದಂತೆ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.