ತುಮಕೂರು: ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದಿಂದ ಶುಕ್ರವಾರ ಆಯೋಜಿಸಿದ್ದ ‘ಒಡಲಾಳ’ ನಾಟಕ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ನಾಟಕ ಪ್ರದರ್ಶನ ನಡೆಯಿತು. ದೇವನೂರು ಮಹದೇವ ರಚನೆ, ನವೀನ್ ಭೂಮಿ ನಿರ್ದೇಶನ ಮತ್ತು ವಿನ್ಯಾಸದಲ್ಲಿ ‘ಒಡಲಾಳ’ ನಾಟಕವು ಉತ್ತಮವಾಗಿ ಮೂಡಿ ಬಂತು. ‘ಮಧುರಿಮ’ ಕುಣಿಗಲ್ ತಂಡದ ಕಲಾವಿದರು ತಮ್ಮ ಅಭಿನಯದ ಮೂಲಕ ಗಮನ ಸೆಳೆದರು.
‘ರಾಮಾಯಣ, ಮಹಾಭಾರತ ಓದಿ ಅರ್ಥ ಮಾಡಿಕೊಂಡವರಿಗಿಂತ, ನಾಟಕಗಳನ್ನು ನೋಡಿ ಮನದಲ್ಲಿ ಅಚ್ಚಳಿಯದಂತೆ ಉಳಿಸಿಕೊಂಡವರೇ ಹೆಚ್ಚು’ ಎಂದು ಸಾಹಿತಿ ಕವಿತಾಕೃಷ್ಣ ಅಭಿಪ್ರಾಯಪಟ್ಟರು.
ಎರಡು ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ’ನಾಟಕಗಳಿಗೆ ಮಾನವನ ಮನಸ್ಸನ್ನು ಸದ್ವಿಚಾರಗಳತ್ತ ತೆಗೆದುಕೊಂಡು ಹೋಗುವ ಶಕ್ತಿಯಿದೆ. ಗ್ರಾಮೀಣ ಕ್ರಿಯಾತ್ಮಕ ರಂಗ ತಂಡವು ಕಳೆದ 15 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ದೇಶಿಯ ಸೊಗಡನ್ನು ಹೊಂದಿರುವ ನಾಟಕಗಳ ಪ್ರಯೋಗಕ್ಕೆ ಒತ್ತು ನೀಡುತ್ತಿದೆ’ ಎಂದರು.
ಅಧ್ಯಾಪಕಿ ಪ್ರಿಯಾಂಕಾ, ಉಮಾಪ್ರಗತಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಕೆಂಪರಾಜು ಕೊಡಿಯಾಲ, ಜಿಲ್ಲಾ ಆರೋಗ್ಯಾಧಿಕಾರಿ ಎನ್.ಟಿ.ಚಂದ್ರಪ್ಪ, ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಪಿ.ಪ್ರಸಾದ್, ದಿನೇಶ್ ಮಾತನಾಡಿದರು. ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಶಿವಕುಮಾರ್ ತಿಮ್ಮಲಾಪುರ, ಕಾಂತರಾಜು ಕೌತುಮಾರನಹಳ್ಳಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.