ADVERTISEMENT

ತೋವಿನಕೆರೆ: ಲೋಕಾಯುಕ್ತ ಬಲೆಗೆ ಗ್ರಾ.ಪಂ ಕಾರ್ಯದರ್ಶಿ, ಬಿಲ್‌ಕಲೆಕ್ಟರ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 11:33 IST
Last Updated 16 ಅಕ್ಟೋಬರ್ 2025, 11:33 IST
   

ತೋವಿನಕೆರೆ (ತುಮಕೂರು): ಮನೆಯ ಖಾತೆ ಬದಲಾವಣೆ ಮಾಡಿಕೊಡಲು ಲಂಚ ತೆಗೆದುಕೊಳ್ಳುತ್ತಿದ್ದ ತೋವಿನಕೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಮ, ಬಿಲ್‌ ಕಲೆಕ್ಟರ್ ಮಾರುತಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ತೋವಿನಕೆರೆ ಗ್ರಾ.ಪಂ ಕಚೇರಿಯಲ್ಲಿ ಗುರುವಾರ ಕಾರ್ಯದರ್ಶಿ ಸುಮ, ಬಿಲ್‌ ಕಲೆಕ್ಟರ್ ಮಾರುತಿ ₹8 ಸಾವಿರ ಲಂಚದ ಹಣ ಪಡೆದುಕೊಳ್ಳುತ್ತಿದ್ದಾಗ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡು, ವಿಚಾರಣೆ ನಂತರ ಬಂಧಿಸಿದ್ದಾರೆ.

ಟಿ.ಕೆ.ಮೊಹಮ್ಮದ್ ಎಂಬುವರು ತೋವಿನಕೆರೆಯಲ್ಲಿ ಮನೆ, ನಿವೇಶನದ ಜಾಗ ಖರೀದಿಸಿದ್ದರು. ಇದೇ ವರ್ಷದ ಆಗಸ್ಟ್ 12ರಂದು ಖಾತೆ ಬದಲಾವಣೆ ಮಾಡಿಕೊಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿ ಎರಡು ತಿಂಗಳಾದರೂ ಖಾತೆ ಬದಲಾವಣೆ ಮಾಡಿಕೊಟ್ಟಿರಲಿಲ್ಲ.

ADVERTISEMENT

ಅಕ್ಟೋಬರ್ 9ರಂದು ಕಚೇರಿಗೆ ಭೇಟಿನೀಡಿ ಬಿಲ್‌ ಕಲೆಕ್ಟರ್ ಮಾರುತಿ ಅವರನ್ನು ಸಂಪರ್ಕಿಸಿದ್ದರು. ಖಾತೆ ವರ್ಗಾವಣೆ ಮಾಡಿಸಿಕೊಡಲು ₹10,800 ಲಂಚ ನೀಡುವಂತೆ ಬೇಡಿಕೆ ಸಲ್ಲಿಸಿದ್ದರು. ಮತ್ತೆ ಅ. 14ರಂದು ಕಚೇರಿಗೆ ಬೇಟಿನೀಡಿ ಲಂಚದ ಹಣ ಕಡಿಮೆ ಮಾಡುವಂತೆ ಕೇಳಿಕೊಂಡಿದ್ದರು. ಆಗ ಕಾರ್ಯದರ್ಶಿ ಸುಮ, ಬಿಲ್‌ ಕಲೆಕ್ಟರ್ ಮಾರುತಿ ಚರ್ಚಿಸಿ, ಕೊನೆಗೆ ₹8 ಸಾವಿರ ನೀಡುವಂತೆ ಹೇಳಿದ್ದರು. ಇದಕ್ಕಿಂತ ಕಡಿಮೆ ಹಣ ಕೊಟ್ಟರೆ ಖಾತೆ ಮಾಡಿಕೊಡುವುದಿಲ್ಲ ಎಂದು ಹೇಳಿದ್ದರು.

ಗ್ರಾ.ಪಂ ಅಧಿಕಾರಿ, ಸಿಬ್ಬಂದಿ ಲಂಚಕ್ಕೆ ಒತ್ತಾಯಿಸುತ್ತಿರುವುದರಿಂದ ಬೇಸತ್ತ ಮೊಹಮ್ಮದ್ ಅ. 15ರಂದು ಲೋಕಾಯುಕ್ತ ಕಚೇರಿಗೆ ಭೇಟಿನೀಡಿ ದೂರು ಸಲ್ಲಿಸಿದ್ದರು. ಗುರುವಾರ ಬೆಳಿಗ್ಗೆ ಲೋಕಾಯುಕ್ತ ಇನ್ಸ್‌ಸ್ಪೆಕ್ಟರ್ ಟಿ.ರಾಜು ನೇತೃತ್ವದಲ್ಲಿ ಬಿ.ಮೊಹಮ್ಮದ್ ಸಲೀಂ, ಕೆ.ಸುರೇಶ್, ಶಿವರುದ್ರಪ್ಪ ಮೇಟಿ ಅವರ ತಂಡ ದಾಳಿ ನಡೆಸಿ ಲಂಚದ ಹಣ ತೆಗೆದುಕೊಳ್ಳುವ ಸಮಯದಲ್ಲಿ ಬಂಧಿಸಿದೆ. ಎಸ್ಪಿ ಎ.ವಿ.ಲಕ್ಷ್ಮಿನಾರಾಯಣ ಮಾರ್ಗದರ್ಶನ ಮಾಡಿದ್ದರು.

ಬಿಲ್‌ ಕಲೆಕ್ಟರ್ ಮಾರುತಿ ಗ್ರಾ.ಪಂ ಕಚೇರಿ ಕೆಲಸವಷ್ಟೇ ಅಲ್ಲದೆ ರಿಯಲ್‌ಎಸ್ಟೇಟ್ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿಯ ನಂತರ ಮಾರುತಿ ಮನೆ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.