ತುಮಕೂರು: ನಗರದ ಸಿದ್ಧಗಂಗಾ ತಾಂತ್ರಿಕ ಕಾಲೇಜಿನ ಗಣಕ ತಾಂತ್ರಿಕ ವಿಭಾಗವು ಈಚೆಗೆ ಆಯೋಜಿಸಿದ್ಧ ರಾಜ್ಯ ಮಟ್ಟದ ‘ಹ್ಯಾಕ್ ಫೆಸ್ಟ್–2018’ ನಲ್ಲಿ ಬೆಂಗಳೂರಿನ ಕೆ.ಎಸ್.ಐ.ಟಿ. ಕಾಲೇಜಿನ ವಿದ್ಯಾರ್ಥಿಗಳ ತಂಡಕ್ಕೆ ₹ 25 ಸಾವಿರ ನಗದು ಪುರಸ್ಕಾರವನ್ನೊಳಗೊಂಡ ಪ್ರಥಮ ಬಹುಮಾನ ಲಭಿಸಿತು.
ಸಂವಹನ ಕ್ಷೇತ್ರದಲ್ಲಿ ಕಂಡು ಬರುವ ಸಮಸ್ಯೆಗಳಿಗೆ ಪರಿಹಾರ ಎಂಬ ವಿಷಯಕ್ಕೆ ಸಂಬಂಧಿಸಿದ ಮಾದರಿಗೆ ಈ ಬಹುಮಾನ ಲಭಿಸಿದೆ.
ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಕ್ರಮವಾಗಿ ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಐ.ಟಿ ಕಾಲೇಜು ಮತ್ತು ಬೆಂಗಳೂರಿನ ಆಕ್ಸಫರ್ಡ್ ಕಾಲೇಜಿನ ವಿದ್ಯಾರ್ಥಿಗಳ ತಂಡಗಳು ಪಡೆದುಕೊಂಡರು. ಕಾಲೇಜಿನ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ.ಶಿವಕುಮಾರಯ್ಯ ಬಹುಮಾನ ವಿತರಿಸಿದರು.
ರಾಜ್ಯದ ವಿವಿಧ ತಾಂತ್ರಿಕ ಕಾಲೇಜುಗಳಿಂದ ಒಟ್ಟು 40 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ವಿದ್ಯಾರ್ಥಿಗಳಿಗೆ 24 ಗಂಟೆಗಳ ಅವಧಿಯನ್ನು ನೀಡಲಾಗಿತ್ತು. ಕೃಷಿ, ಪರಿಸರ, ಸರಕು ಸಾಗಣೆ, ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಿಗೆ ಸಂಬಂಧಪಟ್ಟ ನೈಜ ಸಮಸ್ಯೆಗಳಿಗೆ ಮಾಹಿತಿ ತಂತ್ರಜ್ಞಾನ (ಐಟಿ) ಆಧಾರಿತ ಪರಿಹಾರ ರೂಪಿಸಲು ಸೂಚಿಸಲಾಗಿತ್ತು.
ತಾವೇ ಆಯ್ಕೆ ಮಾಡಿಕೊಂಡ ಸಮಸ್ಯೆಗಳಿಗೆ ತಂಡಗಳು ಪರಿಹಾರ ಹುಡುಕುವ ಪ್ರಯತ್ನ ಮಾಡಿದವು. ಹೆಸರಾಂತ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಹಳೆಯ 20 ವಿದ್ಯಾರ್ಥಿಗಳು 40 ತಂಡಗಳಿಗೆ ಮಾರ್ಗದರ್ಶನ ನೀಡಿದರು.
ಬೆಂಗಳೂರಿನ ಡೀಪ್ ರೂಟ್ ಲಿನಕ್ಸ್ ಮುಖ್ಯಸ್ಥರಾದ ಅಭಿನವ್ ಅಭಾಸ್, ಥರ್ಮೊ ಫಿಶರ್ ಸೈಂಟಿಫಿಕ್ನ ವಿಜಯ್ ಕುಲಕರ್ಣಿ, ಇಂಕ್ ಯೂ ಪ್ಲಸ್ನ ಸಂತೋಷ್ ಅವರು ತೀರ್ಪುಗಾರರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.