ಶಿರಾ: ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಸಲು ಶುಕ್ರವಾರ ಚಾಲನೆ ನೀಡಲಾಯಿತು.
ತಾಲ್ಲೂಕಿನಲ್ಲಿ ಈ ಬಾರಿ ಮಳೆ ಬರದಿದ್ದರೂ ಹೇಮಾವತಿ ನೀರಿನಿಂದ ಶಿರಾ ದೊಡ್ಡ ಕೆರೆ ಹಾಗೂ ಕಳ್ಳಂಬೆಳ್ಳ ಕೆರೆ ಭರ್ತಿಯಾದ ಹಿನ್ನಲೆಯಲ್ಲಿ ಮದಲೂರು ಹಾಗೂ ಮಾರ್ಗ ಮಧ್ಯದ 11 ಕೆರೆಗಳಿಗೆ ನೀರು ಹರಿಸಲು ಶುಕ್ರವಾರ ಶಾಸಕ ಟಿ.ಬಿ.ಜಯಚಂದ್ರ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಚಾಲನೆ ನೀಡಿದರು.
ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ₹59.85 ಕೋಟಿ ವೆಚ್ಚದಲ್ಲಿ 32 ಕಿ.ಮೀ ಉದ್ದದ ನಾಲೆ ನಿರ್ಮಿಸಲಾಗಿದೆ.
ಕಳೆದ ನಾಲ್ಕು ಚುನಾವಣೆಯಲ್ಲಿ ಇದು ತಾಲ್ಲೂಕಿನ ಮಟ್ಟಿಗೆ ಪ್ರಮುಖ ಚುನಾವಣೆ ಅಸ್ತ್ರವಾಗಿತ್ತು. 2020ರಲ್ಲಿ ನಡೆದ ವಿಧಾನಸಭೆಯ ಉಪಚುನಾವಣೆಯಲ್ಲಿ ಮದಲೂರು ಕೆರೆಗೆ ಹೇಮಾವತಿ ಹರಿಸುವ ವಿಚಾರ ಹೆಚ್ಚು ಸದ್ದು ಮಾಡಿ ರಾಜ್ಯದ ಗಮನವನ್ನು ತನ್ನ ಕಡೆ ಸೆಳೆದಿತ್ತು.
ಕಳೆದ ವರ್ಷ ಮದಲೂರು ಕೆರೆ ಭರ್ತಿಯಾಗಿದ್ದು, ಈ ಬಾರಿ ಸಹ ಕೆರೆ ತುಂಬಿಸುವುದಾಗಿ ಶಾಸಕ ಟಿ.ಬಿ.ಜಯಚಂದ್ರ ಅವರು ಭರವಸೆ ನೀಡಿರುವುದು ಜನರಲ್ಲಿ ಸಂತಸ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.