ADVERTISEMENT

ಅವಕಾಶ ವಂಚಿತರ ಮೇಲೆತ್ತಿ

ಹೊಯ್ಸಳ ಕರ್ನಾಟಕ ಸಂಘದ ದಶಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:30 IST
Last Updated 8 ಡಿಸೆಂಬರ್ 2019, 20:30 IST
ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ದಶಮಾನೋತ್ಸವ ಹಾಗೂ ಹೊಯ್ಸಳ ಬಾಂಧವರ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು.
ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ದಶಮಾನೋತ್ಸವ ಹಾಗೂ ಹೊಯ್ಸಳ ಬಾಂಧವರ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು.   

ತುಮಕೂರು: ಬ್ರಾಹ್ಮಣರು ಸಂಘಟನೆಯ ಜತೆ ಜತೆಗೆ ಸಮುದಾಯದಲ್ಲಿರುವ ಅವಕಾಶ ವಂಚಿತರನ್ನು ಮೇಲಕ್ಕೆತ್ತುವ ಕೆಲಸ ಮಾಡಬೇಕು ಎಂದು ವಿಶ್ರಾಂತ ಡಿ.ಜಿ.ಪಿ ಡಾ.ಡಿ.ವಿ.ಗುರುಪ್ರಸಾದ್ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘ ದಶಮಾನೋತ್ಸವ ಸಮಾರಂಭ ಹಾಗೂ ಹೊಯ್ಸಳ ಬಾಂಧವರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಬ್ರಾಹ್ಮಣರು ತಮ್ಮ ಸಮುದಾಯಕ್ಕೆ ವೈಯಕ್ತಿಕವಾಗಿ ಏನು ಮಾಡಿದ್ದೇವೆ ಎಂಬುದನ್ನು ಯೋಚಿಸಬೇಕು. ಬ್ರಾಹ್ಮಣರಲ್ಲಿ ವಿದ್ಯೆ, ಅಡುಗೆ, ಶಿಕ್ಷಣ, ಪೌರೋಹಿತ್ಯ, ಅಕೌಂಟಿಂಗ್ ಹೀಗೆ ನಾನಾ ರೀತಿಯ ಪ್ರತಿಭೆ, ಕೌಶಲಗಳು ಅಡಗಿವೆ. ಈ ಕೌಶಲಗಳನ್ನು ತಮಗೆ ಮಾತ್ರವೇ ಬಳಸಿಕೊಳ್ಳದೇ ಸಮಾಜದ ಇತರರಿಗೂ ದೊರಕುವಂತೆ ಮಾಡಬೇಕು ಎಂದು ಹೇಳಿದರು.

ADVERTISEMENT

ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ನಟಿ ಸುಧಾ ಬೆಳವಾಡಿ, ‘ನಾವು ನಮ್ಮ ಸ್ವಂತಿಕೆ ಮರೆತು ಜೀವಿಸುತ್ತಿದ್ದೇವೆ. ಸೂಕ್ಷ್ಮ ಮನೋಭಾವ ಕಣ್ಮರೆ ಆಗುತ್ತಿದೆ. ನಗರ ಪ್ರದೇಶಗಳಲ್ಲಿ ಮನುಷ್ಯ ಸಂಬಂಧ ದೂರವಾಗುತ್ತಿವೆ’ ಎಂದರು.

ಹಿರಿಯ ಮುಖಂಡ ಎಚ್.ಎನ್.ಹಿರಣ್ಣಯ್ಯ ಸ್ವಾಮಿ, ‘ಬ್ರಾಹ್ಮಣರ ಸಂಘಟನೆಯಲ್ಲಿ ತುಮಕೂರು ಜಿಲ್ಲೆ ಎಂದಿಗೂ ಹಿಂದೆ ಬಿದ್ದಿಲ್ಲ. ಬ್ರಾಹ್ಮಣರು ಸಂಘಟನೆಯಾಗಬೇಕು ಎಂಬ ಆಲೋಚನೆ ಬೆಳೆದಿದ್ದೆ ತುಮಕೂರಿನಲ್ಲಿ’ ಎಂದರು.

ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ರಾಮಮೂರ್ತಿ ಮಾತನಾಡಿದರು. ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಎಸ್.ರಾಘವೇಂದ್ರ ಅಧ್ಯಕ್ಷತೆ
ವಹಿಸಿದ್ದರು.

ಕಾರ್ಯದರ್ಶಿ ಕೆ.ಹಿರಿಯಣ್ಣ, ಹೊಯ್ಸಳ ಕರ್ನಾಟಕ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ.ಎನ್.ವೆಂಕಟೇಶಮೂರ್ತಿ, ಬೆಂಗಳೂರು ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಬಿ.ಚಂದ್ರಶೇಖರಯ್ಯ, ಎನ್.ಆರ್.ನಾಗರಾಜರಾವ್, ಪಾಲಿಕೆ ಸದಸ್ಯ ಸಿ.ಎನ್.ರಮೇಶ್, ಸ್ಮರಣ ಸಂಚಿಕೆ ಸಂಪಾದಕ ಟಿ.ಎಸ್.ರಾಮಶೇಷ, ನರಸಿಂಹ, ಡಿ.ಎಸ್.ಹೊನ್ನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.