ADVERTISEMENT

ಅರಸೀಕೆರೆ ಕೆರೆ ಪಾತ್ರದಿಂದ ಅಕ್ರಮ ಮರಳು ಸಾಗಣೆ; ಆರೋಪ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 8:17 IST
Last Updated 19 ಜೂನ್ 2020, 8:17 IST
ಪಾವಗಡ ತಾಲ್ಲೂಕು ಅರಸೀಕೆರೆ ಕೆರೆಯ ಬಳಿಯಿರುವ ರಸ್ತೆಯನ್ನು ಮರಳು ಸಾಗಣೆ ಮಾಡುವವರು ಹಾಳು ಮಾಡಿರುವುದು
ಪಾವಗಡ ತಾಲ್ಲೂಕು ಅರಸೀಕೆರೆ ಕೆರೆಯ ಬಳಿಯಿರುವ ರಸ್ತೆಯನ್ನು ಮರಳು ಸಾಗಣೆ ಮಾಡುವವರು ಹಾಳು ಮಾಡಿರುವುದು   

ಪಾವಗಡ: ತಾಲ್ಲೂಕಿನ ತುಮಕುಂಟೆ ರಸ್ತೆಯಲ್ಲಿರುವ ಅರಸೀಕೆರೆ ಗುಜ್ಜಾರ ಆಂಜನೇಯಸ್ವಾಮಿ ಕೆರೆ ಪಾತ್ರದಲ್ಲಿನ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಪ್ರದೇಶದ ಜಮೀನುಗಳಿಗೆ ಕೃಷಿ ಚಟುವಟಿಕೆಗಳಿಗಾಗಿ ಓಡಾಡಲು ಇರುವ ರಸ್ತೆಗಳನ್ನು ಹಾಳು ಮಾಡಿ ದಂಧೆಕೋರರು ಮರಳು ಸಾಗಿಸುತ್ತಿದ್ದಾರೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಸುತ್ತಮುತ್ತಲ ಜಮೀನುಗಳಲ್ಲಿ ಅಂತರ್ಜಲ ಕುಸಿದು ರೈತರು ಕಷ್ಟದ ಸ್ಥಿತಿಯಲ್ಲಿದ್ದಾರೆ. ಮರಳು ಗಣಿಗಾರಿಕೆ ನಿಯಂತ್ರಿಸುವಲ್ಲಿ ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.

ಇದೇ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಸಸಿ ನೆಡಲಾಗಿದ್ದು, ಗಿಡ ಮರಗಳನ್ನೂ ಮರಳು ಸಾಗಿಸುವವರು ಕಿತ್ತು ಹಾಕುತ್ತಿದ್ದಾರೆ. ಪೊಲೀಸ್ ಠಾಣೆ ಮುಂಭಾಗದಿಂದಲೇ ಮರಳಿನ ಟ್ರಾಕ್ಟರ್‌ಗಳು ಸಂಚರಿಸಿದರೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ಸಾಗಿಸಲು, ಜಮೀನುಗಳಿಗೆ ಹೋಗಿ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕೆರೆ ಪಾತ್ರದಲ್ಲಿ ಮರಳು ಸಾಗಿಸದಂತೆ ಕ್ರಮ ತೆಗೆದುಕೊಳ್ಳಬೇಕು. ಕೆರೆ, ಗಿಡ ಮರಗಳು, ರಸ್ತೆಯನ್ನು ಸಂರಕ್ಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.