ಕೊಡಿಗೇನಹಳ್ಳಿ: ಮಧುಗಿರಿ ತಾಲ್ಲೂಕು ಬಯಲುಸೀಮೆ ಪ್ರದೇಶವಾಗಿದ್ದರೂ ಇಲ್ಲಿನ ಮೀನುಗಾರಿಕೆ ಇಲಾಖೆ ಅಧಿಕಾರಿಯ ಕಾಳಜಿ ಹಾಗೂ ಶ್ರಮದಿಂದಾಗಿ ತಾಲ್ಲೂಕಿನ ಹಲವು ನಿರುದ್ಯೋಗಿ ಯುವಕರಿಗೆ ಮೀನುಗಾರಿಕೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ.
ತಾಲ್ಲೂಕು ನೀಲಿ ಕ್ರಾಂತಿಯತ್ತ ಸಾಗಲು ಶ್ರಮಿಸುತ್ತಿರುವ ಮೀನುಗಾರಿಕೆ ಇಲಾಖೆಯ ತಾಲ್ಲೂಕು ಮೇಲ್ವಿಚಾರಕ ಆರ್.ರಂಗಸ್ವಾಮಿ ಅವರ ಕ್ರಮಕ್ಕೆ ರೈತರು, ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನಲ್ಲಿ 48 ಮೀನುಗಾರಿಕೆ ಇಲಾಖೆ ಕೆರೆಗಳಿವೆ. ಈ ಕೆರೆಗಳನ್ನು ಮೀನುಗಾರಿಕೆಗೆ ಹರಾಜು ಮಾಡುವ ಮೂಲಕ ಸರ್ಕಾರದ ಜಲ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಮೀನು ಮರಿಗಳನ್ನು ಪಾಲನೆ ಮಾಡಿ ಹಂಚುವುದರಿಂದ ರೈತರಿಗೆ ಮತ್ತು ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುವಂತಾಗಿದೆ. ಬರದನಾಡು ಎಂದೇ ಕರೆಸಿಕೊಳ್ಳುವ ತಾಲ್ಲೂಕಿನಲ್ಲೂ ಮೀನುಗಾರಿಕೆ ಸದ್ದು ಮಾಡುತ್ತಿದೆ.
ಮೀನುಗಾರಿಕೆ ಇಲಾಖೆಯಿಂದ ಬಡ ಮೀನುಗಾರರಿಗೆ ಹಾಗೂ ಮೀನು ಕೃಷಿಯಲ್ಲಿ ತೊಡಗಿಕೊಂಡವರಿಗೆ ಮೀನು ಹಿಡಿಯಲು ಸಲಕರಣೆ, ಪೈಬರ್ ಗ್ಲಾಸ್ ದೋಣಿ, ಮೀನು ಮಾರಾಟಕ್ಕಾಗಿ ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ, ಮತ್ಸ್ಯಾಶ್ರಯ ಯೋಜನೆಯಡಿ ವಸತಿರಹಿತ ಮೀನುಗಾರರಿಗೆ ಮನೆ ಒದಗಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಕೆರೆ, ಕುಂಟೆ, ಕಟ್ಟೆ ಹಾಗೂ ಕೃಷಿ ಹೊಂಡಗಳಲ್ಲಿ ವಿವಿಧ ತಳಿಗಳನ್ನು ಬಿತ್ತನೆ ಮಾಡಲು ಆಸಕ್ತಿ ಇರುವವರು ಈ 8073608429 ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಮೀನುಗಾರಿಕೆ ಇಲಾಖೆ ಮೇಲ್ವಿಚಾರಕ ಆರ್.ರಂಗಸ್ವಾಮಿ ತಿಳಿಸಿದರು.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕಡಿಮೆ ವಿಸ್ತೀರ್ಣ ಮತ್ತು ಕಡಿಮೆ ಅವಧಿಯಲ್ಲಿ ವೈಜ್ಞಾನಿಕ ವಿಧಾನಗಳ ಮೂಲಕ ಹೆಚ್ಚು ಮೀನನ್ನು ಬೆಳೆಸುವ ತಂತ್ರಜ್ಞಾನಗಳಾದ ಬಯೋಪ್ಲಾಕ್, ಆರ್ಎಎಸ್ ಘಟಕಗಳಿಗೆ ಸಹಾಯಧನ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಯುವಕರು ಇಂತಹ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿಯಾಗಬಹುದು ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ನಿರ್ದೇಶಕ ರಾಮಾಚಾರ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.