ತುಮಕೂರು: ನವದೆಹಲಿಯಲ್ಲಿ ರೈತರು ಒಂದು ವರ್ಷಕ್ಕೂ ಹೆಚ್ಚು ಹೋರಾಟ ನಡೆಸಿದರೂ ಮಾಧ್ಯಮಗಳು ಸಮರ್ಪಕವಾಗಿ ಬೆಳಕು ಚೆಲ್ಲುವ ಕೆಲಸ ಮಾಡಲಿಲ್ಲ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.
ದೆಹಲಿಯಲ್ಲಿ ನಡೆದ ರೈತರ ಹೋರಾಟದಲ್ಲಿ ಹಲವು ರೈತರು ಸಾವನ್ನಪ್ಪಿದರೂ, ಸಾವಿನ ಸಂಖ್ಯೆ ಮುಚ್ಚಿಡಲಾಯಿತು. ಖಚಿತ ಮಾಹಿತಿ ನೀಡುವ ಪ್ರಯತ್ನವನ್ನು ಮಾಧ್ಯಮಗಳು ಮಾಡಲಿಲ್ಲ. ಆದರೆ ಇದೇ ಸಮಯದಲ್ಲಿ ಅಂಬಾನಿ, ಅದಾನಿ ವಿಜೃಂಭಿಸಿದರು. ಭಾರತದ ಶೇ 60ರಷ್ಟು ಮಾಧ್ಯಮಗಳು ಅಂಬಾನಿ ಕೈಯಲ್ಲಿವೆ. ಅಂಬಾನಿ ದೇಶದ ಅತಿದೊಡ್ಡ ಮಾಧ್ಯಮ ಮಾಲೀಕರಾಗಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಸಮಯದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದರು ಎಂದು ಯಾವುದೇ ಪತ್ರಿಕೆ ನಿಖರವಾಗಿ ಬರೆಯಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆ 4.7 ಮಿಲಿಯನ್ (47 ಲಕ್ಷ) ಭಾರತೀಯರು ಸಾವನ್ನಪ್ಪಿದರು ಎಂದು ಹೇಳಿತು. ಕೇಂದ್ರ ಸರ್ಕಾರ, ಮಾಧ್ಯಮಗಳು 4.86 ಲಕ್ಷ ಜನ ಸಾವನ್ನಪ್ಪಿದರು ಎಂದು ಹೇಳಿದವು. ಸಮರ್ಪಕ ಮಾಹಿತಿ ನೀಡುವ ಕೆಲಸ ಮಾಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.