ಕುಣಿಗಲ್: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ವೈದ್ಯರು ಸ್ಪಂದಿಸಿಲ್ಲ ಎಂದುಆರೋಪಿಸಿ ಆಸ್ಪತ್ರೆಯ ಬಾಗಿಲ ಬಳಿ ಮಲಗಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಸೋಂಕಿತ ವ್ಯಕ್ತಿ ಗುರುವಾರ ರಾತ್ರಿ ಚಿಕಿತ್ಸೆಗಾಗಿ ಬಂದಿದ್ದರು. ರಾತ್ರಿ ಪಾಳಿಯ ವೈದ್ಯರು ಸ್ಪಂದಿಸದ ಕಾರಣ ಬೆಳಿಗ್ಗೆವರೆಗೆ ಆಸ್ಪತ್ರೆಯ ಪಡಸಾಲೆಯ ಕುರ್ಚಿಯಲ್ಲಿ ಕುಳಿತು ಕಾಲ ಕಳೆದಿದ್ದಾರೆ. ಬೆಳಿಗ್ಗೆ ಅವರ ಸಂಬಂಧಿಯಾದ ವಕೀಲ ಗಂಗಾಧರ್ ಎಂಬುವರು ಬಂದು ವೈದ್ಯರಿಗೆ ಮನವಿ ಮಾಡಿದ್ದಾರೆ. ಆ ಸಮಯದಲ್ಲಿ ಕರ್ತವ್ಯನಿರತ ವೈದ್ಯರು ಶಾಸಕರ ಆಪ್ತ ಸಹಾಯಕ ಚಂದ್ರ ಅವರನ್ನು ಸಂಪರ್ಕಿಸಲುಸೂಚಿಸಿದ್ದಾರೆ. ಇದಕ್ಕೆ ವಕೀಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ‘ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಜಕೀಯ ಪ್ರವೇಶವಾಗಿದೆ. ರಾಜಕೀಯ ಮುಖಂಡರ ಪ್ರಭಾವವಿದ್ದರೆ ಮಾತ್ರ ಸೌಲಭ್ಯ ದೊರೆಯುತ್ತಿವೆ’ ಎಂದು ಆರೋಪಿಸಿ ಸೋಂಕಿತನನ್ನು ಆಸ್ಪತ್ರೆಯ ಬಾಗಿಲ ಬಳಿ ಮಲಗಿಸಿ ಪ್ರತಿಭಟನೆ ನಡೆಸಿದರು.
ಆಡಳಿತ ವೈದ್ಯಾಧಿಕಾರಿ ಗಣೇಶ್ ಬಾಬು ಸೇರಿದಂತೆ ವೈದ್ಯರ ತಂಡ ಘಟನೆ ಈ ಬಗ್ಗೆ ಪ್ರತಿಕ್ರಿಯಿಸಿ, ‘ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಆಮ್ಲಜನಕ ಸಹಿತ ಹಾಸಿಗೆಗಳಿವೆ. ಈಗಾಗಲೇ 72 ಸೋಂಕಿತರಿಗೆ ಹೊಂದಾಣಿಕೆ ಮಾಡಿ ಚಿಕಿತ್ಸೆ ನೀಡುತ್ತಿದ್ದೇವೆ. ಈ ನಡುವೆ ಇನ್ನಷ್ಟು ಸೋಂಕಿತರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಸೋಂಕಿತರಿಗೆ ಮತ್ತು ಸಂಬಂಧಿಕರಿಗೆ ಮನವರಿಕೆ ಮಾಡಿಕೊಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಸ್ಪಂದಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಸೋಂಕಿತರ ಸಂಬಂಧಿಗಳ ಮಾತುಗಳನ್ನು ಕೇಳಲಾಗುತ್ತಿಲ್ಲ. ಮಾನಸಿಕವಾಗಿ ಕಿರಿಕಿರಿಯಾಗುತ್ತಿದೆ’ ಎಂದರು.
ಸ್ಥಳಕ್ಕೆ ಡಿವೈಎಸ್ಪಿ ರಮೇಶ್ ಆಗಮಿಸಿ ಸೋಂಕಿತನ ಸಂಬಂಧಿಗಳು ಮತ್ತು ವೈದ್ಯರೊಂದಿಗೆ ಚರ್ಚಿಸಿದರು. ಸೋಂಕಿತ ವ್ಯಕ್ತಿಯನ್ನು ದಾಖಲಿಸಿಕೊಂಡು ಚಿಕಿತ್ಸೆಗೆ ವ್ಯವಸ್ಥೆ ಮಾಡಿದ ನಂತರ ಪರಿಸ್ಥಿತಿ ತಿಳಿಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.