ತಿಪಟೂರು: ನಗರದ ಎಪಿಎಂಸಿಯ ಹಲವು ವರ್ತಕರ ಮನೆ, ಕಚೇರಿಮತ್ತು ಅಂಗಡಿಗಳಲ್ಲಿ ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳ ದಾಖಲೆ ಪರಿಶೀಲನೆ ಎರಡನೇ ದಿನವಾದ ಗುರುವಾರವೂ ಮುಂದುವರೆದಿದೆ.
ಎಪಿಎಂಸಿ ಮಾರುಕಟ್ಟೆಯ ಕೊಬ್ಬರಿ ವರ್ತಕ ಹಾಗೂ ರವಾನೆದಾರ ಬಿ.ನಂಜಾಮರಿ, ಜಿ.ರುದ್ರಯ್ಯ ಟ್ರೇಡರ್ಸ್, ಸಂಪಿಗೆ ಟ್ರೇಡರ್ಸ್, ವಿ.ಪಿ ಟೇಡರ್ಸ್, ಗಣೇಶ್ ಟ್ರೇಡರ್ಸ್ ಅಂಡ್ ಕೊ–ಅಪರೇಟಿವ್,ಬಿ.ಆರ್. ಸುಂದ್ರಣ್ಣ ಟ್ರೇಡರ್ಸ್ ಮಾಲೀಕಉಮೇಶ್ ಬೆಳ್ಳೂರ್ ಅವರ ಮನೆ ಹಾಗೂ ಅಂಗಡಿಗಳ ಮೇಲೆ ಬುಧವಾರ ಬೆಳಿಗ್ಗೆ ಏಕಕಾಲಕ್ಕೆ ಐ.ಟಿ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ.
ಮಾಜಿ ಶಾಸಕ ಹಾಗೂ ಕೊಬ್ಬರಿ ವರ್ತಕ ಬಿ.ನಂಜಾಮರಿ ಅವರ ಬೆಳಗರಹಳ್ಳಿ ಮನೆಯಲ್ಲಿ ಬುಧವಾರ ರಾತ್ರಿವರೆಗೂ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಬೀಡು ಬಿಟ್ಟಿತ್ತು. ಗುರುವಾರ ಬೆಳಗ್ಗೆಯಿಂದ ಮತ್ತೆ ದಾಖಲೆ ಪರಿಶೀಲನೆ ಕೈಗೊಂಡಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಇತರ ವರ್ತಕರ ಮಾಲೀಕರ ಮನೆಗಳಲ್ಲಿಯೂ ಪರಿಶೀಲನೆ ಮುಂದುವರೆದಿದ್ದು, ಅಗತ್ಯ ದಾಖಲೆ, ಬ್ಯಾಂಕ್ ವಹಿವಾಟು ಸೇರಿದಂತೆ ಇತರೆ ದಾಖಲೆಗಳಿಗಾಗಿ ಜಾಲಾಡುತ್ತಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳ ದಾಳಿ ವೇಳೆ ಬುಧವಾರ ವಿ.ಪಿ ಟ್ರೇಡರ್ಸ್ನ ಗಣೇಶ್ ಪ್ರಸಾದ್ ಅಗರವಾಲ್ ಅಸ್ವಸ್ಥಗೊಂಡಿದ್ದರು.ಆಗ ಕೆಲ ತಾಸು ಅಧಿಕಾರಿಗಳು ತನಿಖೆ ನಿಲ್ಲಿಸಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಗಣೇಶ್ ಆರೋಗ್ಯ ಸ್ಥಿರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.