ಪ್ರಾತಿನಿಧಿಕ ಚಿತ್ರ
ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಮೊದಲು ನಿಗದಿಪಡಿಸಿದ ಜಾಗದಲ್ಲಿ ಜಗಜೀವನ ರಾಂ ಭವನ ನಿರ್ಮಿಸಬೇಕು. ಜಾಗ ಬದಲಾವಣೆ ಮಾಡಿದರೆ ಸಂಘಟನೆಯಿಂದ ಹೋರಾಟ ಮಾಡಲಾಗುವುದು ಎಂದು ಮಾದಿಗ ದಂಡೋರ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಿಗೆ ಪರಿಶಿಷ್ಟರ ಬಗ್ಗೆ ಕಾಳಜಿಯಿದ್ದರೆ ಹಳೆಯ ತಾಲ್ಲೂಕು ಕಚೇರಿ ಪಕ್ಕದಲ್ಲಿಯೇ ನಿರ್ಮಾಣ ಮಾಡಬೇಕು. ಭವನ ನಿರ್ಮಾಣಕ್ಕೆ ಶಾಸಕರು ಹಾಗೂ ಅಧಿಕಾರಿಗಳು ಉದ್ದೇಶಿಸಿರುವ ಜಾಗವನ್ನು ಕೈಬಿಡಬೇಕು. ಸಂಘಟನೆಯವರ ಗಮನಕ್ಕೆ ತಾರದೆ ಏಕಾಏಕಿ ನಿರ್ಧಾರ ಮಾಡಿ ಬದಲಾವಣೆ ಮಾಡಿರುವುದು ಎಷ್ಟು ಸರಿಯಲ್ಲ ಎಂದರು.
ಹಲವು ಹೋರಾಟಗಳ ಫಲವಾಗಿ ಭವನ ನಿರ್ಮಾಣಕ್ಕೆ ₹3 ಕೋಟಿ ಬಿಡುಗಡೆಯಾಗಿದ್ದರೂ ನಿವೇಶನ ಸಮಸ್ಯೆಯಿಂದ ಭವನ ನಿರ್ಮಾಣ ಸಾಧ್ಯವಾಗಿಲ್ಲ. ಈ ಹಿಂದೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕುಂದುಕೊರತೆ ಸಭೆಯಲ್ಲಿ ಚರ್ಚಿಸಿ ಹಳೆಯ ತಾಲ್ಲೂಕು ಕಚೇರಿ ಜಾಗವನ್ನು ಗುರ್ತಿಸಲಾಗಿತ್ತು. ಶಾಸಕ ಸುರೇಶ್ಬಾಬು ಸಭೆಯಲ್ಲಿ ತೀರ್ಮಾನಿಸಿದಂತೆ ಈಗ ಮಂಜೂರಾಗಿರುವ ಸ್ಥಳದ ಪತ್ರವನ್ನು ಮರು ದಾಖಲೆ ಮಾಡಬೇಕು. ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದರು.
ಮಾತಂಗ ಪರಿವಾರದ ಸಾಲ್ಕಟ್ಟೆ ಗುರುಮೂರ್ತಿ ಮಾತನಾಡಿ, ಪಟ್ಟಣದ ಸಿಡಿಪಿಒ ಕಚೇರಿ ಬಳಿ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ವಿರೋಧವಿದೆ. 14ರಂದು ಶಂಕುಸ್ಥಾಪನೆಗೆ ವಿರೋಧವಿದ್ದು, ಕಾರ್ಯಕ್ರಮ ರದ್ದುಗೊಳಿಸಬೇಕು ಎಂದರು.
ಗೋಷ್ಠಿಯಲ್ಲಿ ಯರೇಕಟ್ಟೆ ರಮೇಶ್, ಮುರುಳಿ, ಮಂಜುನಾಥ್, ಹೊನ್ನೆಬಾಗಿ ರಾಮಯ್ಯ, ಅಗಸರಹಳ್ಳಿ ನರಸಿಂಹಮೂರ್ತಿ, ರಾಮನಹಳ್ಳಿ ಶಾರದಮ್ಮ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.