ತುಮಕೂರು: ಅತ್ಯಾಚಾರಿಗಳಿಗೆ ತಕ್ಷಣ ಶಿಕ್ಷೆಯಾಗುವ ಕಾನೂನು ತರದೇ ಹೋದರೆ ಕಷ್ಟವಾಗಲಿದೆ. ಹಾಗಾಗಿ ಕೆಲ ಕಾನೂನು ತಿದ್ದುಪಡಿ ಮಾಡುವಂತೆ ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೈದರಾಬಾದ್ ಎನ್ಕೌಂಟರ್ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ನಮ್ಮ ಕಾನೂನಿನಲ್ಲೆ ಕೆಲ ತಿದ್ದುಪಡಿಯಾಗಬೇಕು. ನಾನೊಬ್ಬ ಕಾನೂನು ಸಚಿವನಾಗಿ ಕೆಲ ಕಾನೂನು ವಿಷಯದ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಲಿದ್ದೇನೆ’ ಎಂದರು.
ದೇಶದಲ್ಲಿ 1860ರಷ್ಟು ಹಿಂದೆ ಮಾಡಿರುವಂತಹ ಐಪಿಸಿ, ಸಿಆರ್ಪಿಸಿ ಕಾಯ್ದೆಗಳು ಈಗ ಸತ್ವ ಕಳೆದುಕೊಂಡಿವೆ. ಅಂದು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡಿದರೆ ₹1 ಸಾವಿರ ದಂಡ ಅಂತಿದ್ದು, ಈ ₹1 ಸಾವಿರ ದಂಡವನ್ನು ಆರೋಪಿಗಳು ಖುಷಿಯಾಗಿ ಕೊಟ್ಟು ಹೋಗುತ್ತಾರೆ. ಈ ಬಗ್ಗೆ ಕಾನೂನು ಬಿಗಿಯಾಗಬೇಕಿದೆ. ಇದರ ಕುರಿತು ನಾವು ಚರ್ಚೆ ಮಾಡಿ ಕಾನೂನು ತಿದ್ದುಪಡಿ ಮಾಡುವಂತೆ ಸಂಸತ್ತಿಗೆ ಸಲಹೆ ನೀಡುತ್ತೇವೆ ಎಂದು ತಿಳಿಸಿದರು.
ಅಲ್ಲದೇ ರಾಜ್ಯದಲ್ಲಿ ಅಹಿತಕರ ಘಟನೆಗಳು ಆಗಲು ಬಿಡುವುದಿಲ್ಲ. ನಾನು ಮತ್ತು ಗೃಹಸಚಿವರು ಸದಾ ಸಂಪರ್ಕದಲ್ಲಿ ಇದ್ದು, ಮುಖ್ಯವಾಗಿ ಬೆಂಗಳೂರು ನಗರದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.