ತುಮಕೂರು: ಕನ್ನಡ ಸತ್ವಯುತ ಪ್ರಾಚೀನ ಭಾಷೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಸಾಹಿತಿ ಜಿ.ಕೆ.ಕುಲಕರ್ಣಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಲೇಖಕಿಯರ ಸಮ್ಮೇಳನದ ದತ್ತಿ, ಪುಸ್ತಕಗಳ ಬಿಡುಗಡೆ, ಪ್ರತಿಭಾ ಕಲರವ ಅಭಿನಂದನಾ ಪತ್ರ ವಿತರಣೆ ಮತ್ತು ‘ಕನ್ನಡಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಸುಲಲಿತ ಭಾಷೆ. ಬಸವಣ್ಣನ ಕಾಲದಿಂದ ಹಿಡಿದು ಇಲ್ಲಿಯವರೆಗೂ ಸಾಕಷ್ಟು ಬೆಳೆದುಬಂದಿದೆ. ಕನ್ನಡ ಭಾಷೆ ಸುಲಿದ ಬಾಳೆಹಣ್ಣಿನಂತೆ. ವಚನಕಾರರು ಸರಳವಾಗಿ ಕನ್ನಡದಲ್ಲಿ ವಚನಗಳನ್ನು ರಚಿಸಿ ಸಾಮಾನ್ಯರಿಗೆ ಅರ್ಥಮಾಡಿಸಿದರು ಎಂದು ತಿಳಿಸಿದರು.
ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಯಾವುದೇ ಧರ್ಮ ಕೊಲ್ಲುವಂತೆ ಹೇಳುವುದಿಲ್ಲ. ಜನರ ನಡುವೆ ತಾರತಮ್ಯ ಬೋಧಿಸುವುದಿಲ್ಲ. ಗಾಂಧೀಜಿ ಅವರ ಶಾಂತಿ, ಅಹಿಂಸೆ ಮತ್ತು ಸತ್ಯದ ತತ್ವಗಳು ಒಳಿತಿನ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ. ಇಂತಹ ಮಹತ್ವದ ಅಂಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಕನ್ನಡ ಕಟ್ಟುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು. ದೇವಪ್ರಕಾಶ್ ಮತ್ತು ಶಾಲಿನಿ ನಾಲ್ಕು ದತ್ತಿ ಪ್ರಶಸ್ತಿಗಳನ್ನು ಕಸಾಪದಲ್ಲಿ ಇಟ್ಟಿದ್ದಾರೆ. ಜಿಲ್ಲೆಯ ಯುವ ಲೇಖಕರನ್ನು ಪ್ರೋತ್ಸಾಹಿಸುವುದು ಅವರ ಉದ್ದೇಶ ಎಂದು ಹೇಳಿದರು.
ಪ್ರೊ.ಎಸ್.ಆರ್. ದೇವಪ್ರಕಾಶ್ ಮತ್ತು ಶಾಲಿನಿ ಅವರ ಗಾಂಧೀಜಿ ಅವರ ಸತ್ಯಾಗ್ರಹಕ್ಕೆ ಸ್ಫೂರ್ತಿ ನೀಡಿದ ಕ್ರೈಸ್ತ ಗ್ರಂಥಗಳು, ಪ್ರೊ.ದೇವಪ್ರಕಾಶ್ ರಚಿತ ಮ್ಯಾಕ್ಮುಲ್ಲರ್ ಅವರ ಭಾರತ ನಮಗೆ ಏನು ಕಲಿಸಬಹುದು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕವಿ ಸಂತೋಷ್ ಮಡೇನೂರು ಅವರಿಗೆ ‘ಕನ್ನಡಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಾಗರತ್ನ ಚಂದ್ರಪ್ಪ, ಲೇಖಕಿ ಸಿ.ಎ.ಇಂದಿರಾ, ಸ್ನೇಹ ಕ್ರೀಡಾ ಮತ್ತು ಸಾಂಸ್ಕೃತಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಉಮಾದೇವಿ ಉಪಸ್ಥಿತರಿದ್ದರು.
ಲೇಖಕಿ ಶೈಲಾನಾಗರಾಜ್ ಸ್ವಾಗತಿಸಿದರು. ಕಸಾಪ ಕೋಶಾಧ್ಯಕ್ಷ ಬಿ.ಮರುಳಯ್ಯ ವಂದಿಸಿದರು. ಕಾರ್ಯದರ್ಶಿ ಕೆ.ರವಿಕುಮಾರ್ ನಿರೂಪಿಸಿದರು. ಪಾರ್ವತಮ್ಮ, ಗಂಗಲಕ್ಷ್ಮಿ ಸಂಗಡಿಗರು ನಾಡಗೀತೆ ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.