ತುಮಕೂರು: ‘ತ್ಯಾಗಮಾಡಿ ಬಂದಿದ್ದೇವೆ. ನಮ್ಮಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ’ ಎಂಬ ವಿಚಾರವನ್ನೇ ಎಷ್ಟು ದಿನಗಳ ಕಾಲ ಹೇಳಿಕೊಂಡು ಓಡಾಡುತ್ತೀರಿ ಎಂದು ತೋಟಗಾರಿಕೆ ಸಚಿವ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಜತೆಯಲ್ಲಿ ಪಕ್ಷ ತೊರೆದು ಬಂದು ಬಿಜೆಪಿ ಸೇರಿದವರು ಸಚಿವರಾದ ನಂತರ ಇಂತಹುದೇ ಖಾತೆ ಕೊಡಬೇಕು ಎಂದು ಕ್ಯಾತೆ ತೆಗೆದಿರುವುದನ್ನು ವಿರೋಧಿಸಿದರು.
ಸಿದ್ಧಗಂಗಾ ಮಠಕ್ಕೆ ಭಾನುವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆಗ ತ್ಯಾಗ ಮಾಡಿದ್ದೇವೆ. ಈಗ ದೊಡ್ಡ ಖಾತೆಯೇ ಬೇಕು ಎಂದು ಕೇಳುವುದು ತಪ್ಪು. ಬಿಜೆಪಿಗೆ ನಮ್ಮಗಳ ಕೊಡುಗೆ ಏನೂ ಇಲ್ಲ. ನಾವಿದ್ದ ಪಕ್ಷಕ್ಕೆ ರಾಜೀನಾಮೆ ನೀಡಿ, ಇಲ್ಲಿಗೆ ಬಂದಿದ್ದೇವೆ. ನಂತರ ಶಾಸಕರನ್ನು ಮಾಡಿ, ಈಗ ಸಚಿವ ಸ್ಥಾನ ಕೊಟ್ಟಿದ್ದಾರೆ. ಬಂದ ತಕ್ಷಣ ದೊಡ್ಡ ಹುದ್ದೆ ಕೇಳುವುದು ಸರಿಯಲ್ಲ’ ಎಂದು ಹೇಳಿದರು.
‘ಮೊದಲು ಪಕ್ಷಕ್ಕೆ ಕೆಲಸ ಮಾಡಬೇಕು. ನಾನು ಎರಡು ವರ್ಷ ಏನೂ ಇಲ್ಲದೆ ಸುಮ್ಮನೆ ಪಕ್ಷದ ಕೆಲಸ ಮಾಡಿಕೊಂಡಿದ್ದೆ. ಪಕ್ಷ ಈಗ ಗುರುತಿಸಿದೆ. ತಾಳ್ಮೆಯಿಂದ ಇರಬೇಕು. ಎಲ್ಲಾ ಇವತ್ತೇ ಆಗಬೇಕು ಎಂದರೆ, ನೀವು ಬಂದಿರುವ ಉದ್ದೇಶ ಏನು' ಎಂದು ಪ್ರಶ್ನಿಸಿದರು. ‘ಇವತ್ತು ಏನು ಸಿಗುತ್ತದೆ ಅದನ್ನೆಲ್ಲಾ ಅನುಭವಿಸಿ, ಮತ್ತೆ ವಾಪಸ್ ಹೋಗಬೇಕೆಂಬ ಉದ್ದೇಶವಿದೆಯೆ?’ ಎಂದು ಕುಟುಕಿದರು.
ಬಿಜೆಪಿಯ 105 ಶಾಸಕರು ಇಲ್ಲದಿದ್ದರೆ ನಾವು ಮಂತ್ರಿಗಳಾಗುತ್ತಿರಲಿಲ್ಲ. ಪಕ್ಷ ನಮಗೆ ಏನು ಅನ್ಯಾಯ ಮಾಡಿದೆ. ಮೊದಲು ಪಕ್ಷದ ಕೆಲಸ ಮಾಡಿ. ನಂತರ ಅಧಿಕಾರ ಬರುತ್ತದೆ ಎಂದು ಸಲಹೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.