ತುಮಕೂರು: ರಾಜ್ಯ ಶಿಕ್ಷಣ ನೀತಿಗೆ (ಎಸ್ಇಪಿ) ಅನುಗುಣವಾಗಿ ವಿಶ್ವವಿದ್ಯಾಲಯದ ಪದವಿ ಹಂತದ ಕನ್ನಡ ಭಾಷಾ ಮತ್ತು ಐಚ್ಛಿಕ ಕನ್ನಡದ ಪಠ್ಯಪುಸ್ತಕ ಸಿದ್ಧಪಡಿಸಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಪುಸ್ತಕಗಳಿಗೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ ಎಂದು ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ವಿಶ್ವವಿದ್ಯಾಲಯದಲ್ಲಿ ಸೋಮವಾರ ಪದವಿ ಹಂತದ ಕನ್ನಡ ಭಾಷಾ ಮತ್ತು ಐಚ್ಛಿಕ ಕನ್ನಡ ಪಠ್ಯಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ವಿ.ವಿ ಪ್ರಸಾರಾಂಗದಿಂದ ಪ್ರಕಟಗೊಂಡ ಪಠ್ಯಪುಸ್ತಕ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ತರಗತಿ ಆರಂಭಕ್ಕೂ ಮುನ್ನವೇ ಪುಸ್ತಕ ಸಿಗುವಂತೆ ನೋಡಿಕೊಳ್ಳಲಾಗಿದೆ. ವಿಮರ್ಶಕ ಎಚ್.ಎಸ್.ರಾಘವೇಂದ್ರರಾವ್ ಅವರ ಸರಣಿ ಉಪನ್ಯಾಸ, ಚಂದ್ರಶೇಖರ ಕಂಬಾರರ ‘ಮಹಾಮಾಯಿ’ ನಾಟಕ ಸೇರಿ ಹಲವು ಸಿನಿಮಾ, ಕವನ, ನಾಟಕಗಳನ್ನು ಕ್ಯೂಆರ್ ಕೋಡ್ ಮೂಲಕ ವೀಕ್ಷಿಸಬಹುದು ಎಂದರು.
ಇದುವರೆಗೆ ಓದಲು ಸೀಮಿತವಾಗಿದ್ದ ಪಠ್ಯಪುಸ್ತಕ ಈಗ ಕೇಳುವ, ನೋಡುವ ಪಠ್ಯವಾಗಿ ವಿಸ್ತರಿಸಲಾಗಿದೆ. ಡಿಜಿಟಲ್ ಆಯಾಮ ನೀಡಲಾಗಿದೆ. ರಾಜ್ಯದ ಇತರೆ ವಿ.ವಿಗಳು ಅನುಸರಿಸಬಹುದಾದ ಹೊಸ ಕ್ರಮ ಆರಂಭಿಸಲಾಗಿದೆ ಎಂದು ಶ್ಲಾಘಿಸಿದರು.
ವಿ.ವಿ ಕನ್ನಡ ಅಧ್ಯಯನ ಮಂಡಳಿ ಅಧ್ಯಕ್ಷ ನಿತ್ಯಾನಂದ ಬಿ.ಶೆಟ್ಟಿ, ಉಪಾಧ್ಯಕ್ಷ ಜೆ.ಗಂಗಾಧರ್, ಪಠ್ಯದ ಸಂಪಾದಕರಾದ ಶಿವಲಿಂಗಮೂರ್ತಿ, ಪಿ.ಗಂಗಾಧರಯ್ಯ, ಬಿ.ಆರ್.ರೇಣುಕಾಪ್ರಸಾದ್, ಶಿವಣ್ಣ ಎಸ್.ಬೆಳವಾಡಿ, ಎಂ.ಗೋವಿಂದರಾಯ, ಕೆ.ಎಸ್.ಚೈತ್ರಾಲಿ, ಎಂ.ಕೆ.ಮಂಜುಳಾ, ಸಿ.ಎಚ್.ಮಮತಾ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.