ಪ್ರಜಾವಾಣಿ ವಾರ್ತೆ
ಕೊಡಿಗೇನಹಳ್ಳಿ: ಶಾಸಕ ಕೆ.ಎನ್. ರಾಜಣ್ಣ ಅವರನ್ನು ರಾಜ್ಯ ಸಂಪುಟದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಹೋಬಳಿಯ ಕಾಂಗ್ರೆಸ್ ಕಾರ್ಯಕರ್ತರು, ದಲಿತ ಸಂಘಟನೆಗಳು, ಕನ್ನಡ ಸಂಘಟನೆಗಳು, ಕೆಎನ್ಆರ್ ಹಾಗೂ ಆರ್ಆರ್ ಅಭಿಮಾನಿಗಳು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕೊಲ್ಲಾಪುರದಮ್ಮ ದೇವಸ್ಥಾನದಿಂದ ಗ್ರಾಮ ಪಂಚಾಯಿತಿವರೆಗೆ ಮೆರವಣಿಗೆ ನಡೆಸಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿದರು. ಮಧುಗಿರಿ ತಹಶೀಲ್ದಾರ್ ಶ್ರೀನಿವಾಸ್ಗೆ ಮನವಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ ಮಾತನಾಡಿ, ಬಡವರು, ರೈತರ ಪರವಾಗಿ ಧ್ವನಿ ಎತ್ತುವ ಏಕೈಕ ವ್ಯಕ್ತಿ ರಾಜಣ್ಣ. ಇಂತಹ ಅಹಿಂದ ನಾಯಕರನ್ನು ಸಂಪುಟಕ್ಕೆ ಕೂಡಲೇ ಸೇರಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಹನುಮಂತರಾಯ ಮಾತನಾಡಿ, ಕೆ.ಎನ್. ರಾಜಣ್ಣ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಇದ್ದಂತೆ. ಅವರು ಮನಸ್ಸು ಮಾಡಿದರೆ ಯಾವುದೇ ಪಕ್ಷವನ್ನು ಸೋಲಿಸುವ ಅಥವಾ ಗೆಲ್ಲಿಸುವ ಶಕ್ತಿ ಹೊಂದಿದ್ದಾರೆ. ಅಂತಹ ಧೀಮಂತ ನಾಯಕನನ್ನು ಏಕಾಏಕಿ ಯಾವುದೇ ಕಾರಣಗಳಿಲ್ಲದೆ ಸಂಪುಟದಿಂದ ವಜಾಗೊಳಿಸಿರುವುದು ಖಂಡನೀಯ. ಅಹಿಂದ ನಾಯಕ ರಾಜಣ್ಣನನ್ನು ಈ ಕೂಡಲೇ ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಾಗುವುದು ಎಂದರು.
ದಲಿತ ಮುಖಂಡ ಜೆ.ಡಿ. ವೆಂಕಟೇಶ್ ಮಾತನಾಡಿ, ದಲಿತರು, ಹಿಂದುಳಿದವರು ಹಾಗೂ ಎಲ್ಲ ಬಡವರ ಪರ ನಿಲ್ಲುವ ರಾಜಣ್ಣ ಅವರನ್ನು ಸಂಪುಟಕ್ಕೆ ಈ ಕೂಡಲೇ ಸೇರಿಸಿಕೊಳ್ಳಬೇಕು ಎಂದು ಹೇಳಿದರು.
ಎಂ.ಪಿ. ಕಾಂತರಾಜ್, ಕಡಗತ್ತೂರು ರಾಜಶೇಖರರೆಡ್ಡಿ, ಶಾಮೀರ್, ವಕೀಲ ಸಂಜೀವಮೂರ್ತಿ, ಕೆ ವಿ ವೆಂಕಟೇಶ್, ಸಂಜೀವಗೌಡ, ಕೆ.ಟಿ. ತಿಮ್ಮಾರೆಡ್ಡಿ, ನಾರಾಯಣಪ್ಪ, ಗೋಪಾಲಕೃಷ್ಣರೆಡ್ಡಿ, ಶ್ರೀನಿವಾಸ್ ಮೂರ್ತಿ, ಪ್ರೂಟ್ ಕೃಷ್ಣ, ಗುಟ್ಟೆ ರಂಗನಾಥ್, ನ್ಯಾತಪ್ಪ, ಮಕ್ತಿಯಾರ್, ಗೋಪಾಲ್, ಕನ್ನಡ ಸಂಘಟನೆಯ ತೆರಿಯೂರು ಟಿ.ಆರ್. ಶಿವಕುಮಾರ್, ಸಯ್ಯದ್ ರಿಯಾಜ್, ರವಿಕುಮಾರ್, ಸಂಜೀವಮೂರ್ತಿ, ರಾಜಪ್ಪ, ಚಲಪತಿ, ವಿ.ಆರ್. ಭಾಸ್ಕರ್, ದಾಸಪ್ಪ, ಕೆ ಎಂ ರಾಮಾಂಜಿ, ಎಲ್. ರಾಮಯ್ಯ, ಬಾಲಾಜಿ, ಕೆ.ಜೆ. ರಂಗನಾಥ್, ಶಿವಯ್ಯ, ಲಕ್ಷ್ಮಿನಾರಾಯಣ್, ತಿಮ್ಮರಾಜು, ಸುರೇಶ್, ನಾಸೀರ್, ವೆಂಕಟೇಶ್, ಸುನಿಲ್, ನರೇಶ್,ಗಂಗಾಧರ್, ಮೈಲಾರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.