ಕೆ.ಎನ್. ರಾಜಣ್ಣ
ಕೊಡಿಗೇನಹಳ್ಳಿ: ‘ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದರೂ ಗೆಲುವು ಸಾಧಿಸುತ್ತೇನೆ. ಪಕ್ಷೇತರನಾಗಿ ನಿಂತರೂ ಗೆಲ್ಲುತ್ತೇನೆ’ ಎಂದು ಶಾಸಕ ಕೆ.ಎನ್.ರಾಜಣ್ಣ ಇಲ್ಲಿ ಬುಧವಾರ ಹೇಳಿದರು.
ಸಚಿವ ಸ್ಥಾನದಿಂದ ವಜಾಗೊಂಡ ನಂತರ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳ ನಡುವೆ ರಾಜಣ್ಣ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ. ‘ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಕಳೆದ ವಿಧಾನಸಭೆ ಚುನಾವಣೆಯ ನಂತರ ಹೇಳುತ್ತಲೇ ಬಂದಿದ್ದಾರೆ. ಈಗ ಸ್ಪರ್ಧಿಸುವ ಮಾತುಗಳನ್ನಾಡಿದ್ದಾರೆ.
ಕೊಡಿಗೇನಹಳ್ಳಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಮಾತನಾಡಿ, ‘ನಾನೇಕೆ ಬಿಜೆಪಿ ಸೇರಲಿ’ ಎಂದು ಪ್ರಶ್ನಿಸಿದರು. ‘ಬಿಜೆಪಿ ಸೇರುವವರು ಸೇರುತ್ತಾರೆ. ನಾನು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವ ಶಕ್ತಿ ಇದೆ. ನಾನೇಕೆ ಪಕ್ಷ ಬಿಡಬೇಕು. ಪಕ್ಷ ನನಗೆ ಏನು ತೊಂದರೆ ಮಾಡಿದೆ? ಪ್ರತಿ ಕ್ಷೇತ್ರದಲ್ಲೂ ಯಾರನ್ನಾದರೂ ಗೆಲ್ಲಿಸುವ, ಸೋಲಿಸುವ ಶಕ್ತಿ ನನಗಿದೆ’ ಎಂದು ಗುಡುಗಿದರು.
‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವ ತನಕ ಹಾಗೂ ಪಕ್ಷದ ನೇತೃತ್ವ ವಹಿಸಿಕೊಂಡಿರುವ ವರೆಗೆ ನನ್ನ ಭವಿಷ್ಯಕ್ಕೆ ಯಾವುದೇ ತೊಂದರೆ ಇಲ್ಲ. ಅವರು ಪಕ್ಷದಲ್ಲಿ ಇರುವವರೆಗೂ ಪ್ರೀತಿ, ವಿಶ್ವಾಸ ಉಳಿಸಿಕೊಂಡು ಹೋಗುತ್ತೇನೆ’ ಎಂದು ತಿಳಿಸಿದರು.
‘ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ. ರಾಹುಲ್ ಗಾಂಧಿ ನಡೆಸುತ್ತಿರುವ ಮತ ಕಳ್ಳತನ ಹೋರಾಟ ಬೆಂಬಲಿಸುತ್ತೇನೆ. ನನ್ನನ್ನು ಮತ್ತೆ ಸಚಿವರನ್ನಾಗಿ ಮಾಡುವಂತೆ ಒತ್ತಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿಗೆ ಹೋಗುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.