
ಪಾವಗಡ: ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಮಂಗಳವಾರ ಅದ್ದೂರಿಯಾಗಿ ಕೊಲ್ಲಾಪುರದಮ್ಮ ಜಾತ್ರಾ ಮಹೋತ್ಸವ ನಡೆಯಿತು.
ಸೋಮವಾರ ನಿಡಗಲ್ಲಿನ ರಾಮತೀರ್ಥದಲ್ಲಿ ಕೊಲ್ಲಾಪುರಮ್ಮ ದೇವಿ ಜಲಧಿ ಮಹೋತ್ಸವ ನೆರವೇರಿತು. ಮಂಗಳವಾರ ಸಂಜೆ ಗ್ರಾಮದ ಪ್ರತಿ ಮನೆಯಿಂದ ಹೂವುಗಳಿಂದ ವೈವಿಧ್ಯಮಯವಾಗಿ ಸಿಂಗರಿಸಿದ್ದ ಜ್ಯೋತಿಗಳನ್ನು ಹೊತ್ತ ಮಹಿಳೆಯರು ಪುರ ಮೆರವಣಿಗೆ ನಡೆಸಿದರು.
ಕೊಲ್ಲಾಪುರಮ್ಮ ದೇವಿ ಆಲಯದಿಂದ ಪ್ರಾರಂಭವಾಗಿ ಬಸ್ ನಿಲ್ದಾಣ ಮತ್ತು ಶಿರಾ ರಸ್ತೆ ಮೂಲಕ ಸಾಗಿ ಗ್ರಾಮದ ಹೊರ ವಲಯದಲ್ಲಿರುವ ದಿಬ್ಬದಮ್ಮ ದೇವಾಲಯದ ಬಳಿ ಪೂಜೆ ಸಲ್ಲಿಸುವ ಮೂಲಕ ಪುರ ಮೆರವಣಿಗೆ ಮುಕ್ತಾಯವಾಯಿತು.
ಗ್ರಾಮದ ಗೌಡ, ಪಟೇಲ, ಗೊಂಚಗಾರ, ತಳವಾರ ಇತರೆ ಪ್ರಮುಖ ಮನೆತನದವರು ಭಾಗವಹಿಸಿದ್ದರು.
ಅರಸೀಕೆರೆ ಮತ್ತು ಕೊಂಡಾಪುರ ಎರಡು ಗ್ರಾಮಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಮಹಬ್ಬ ಉತ್ಸವದಲ್ಲಿ ದಕ್ಷ ಯಜ್ಞ ಎಂಬ ಪೌರಾಣಿಕ ನಾಟಕ ಹಾಗೂ ದುರಂತ ಪ್ರೇಮಿಗಳು ಎಂಬ ಸಾಮಾಜಿಕ ನಾಟಕವನ್ನು ಜನತೆ ಕಣ್ತುಂಬಿಕೊಂಡರು.