
ಕೊಡಿಗೇನಹಳ್ಳಿ: ಪುರವರ ಹೋಬಳಿಯ ಕೊಂಡವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಬನಶಂಕರಿದೇವಿ (ಚೌಡೇಶ್ವರಿ) ಸಿಡಿ ಜಾತ್ರೆಗೆ ಜನ ಸಾಗರವೇ ಹರಿದು ಬಂದಿತ್ತು.
ಬನಶಂಕರಿದೇವಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಾಗಿರುವ ಕಾರಣ ಈ ಬಾರಿ ನಡೆದ ಮೂರನೆ ದಿನದ ಸಿಡಿ ಜಾತ್ರೆಯಲ್ಲಿ ಸುಮಾರು 13 ರಿಂದ 15 ಸಾವಿರ ಜನರು ಸೇರಿದ್ದರು. ಜಾತ್ರೆಗೆ ಏಳು ಅಮವಾಸೆ ಮನೆ ಬಂಡಿಗಳಲ್ಲಿ ದೇವರನ್ನು ಕರೆದುಕೊಂಡು ಬಂದು ಜಾತ್ರೆ ನಡೆಸಿಕೊಟ್ಟು ಅಗ್ನಿಕೊಂಡ ನೆರವೇರಿಸಿದ ನಂತರ ಬಂಡಿಗಳಲ್ಲಿ ತಮ್ಮ ಗ್ರಾಮಗಳಿಗೆ ವಾಪಸ್ಸಾಗುವುದು ಮೊದಲಿನಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯ.
ಬನಶಂಕರಿದೇವಿ ಕುಂಚಿಟಿಗರ ಬಡವನೋರು ಕುಲದ ಮನೆದೇವತೆಯಾಗಿದ್ದರೂ ಇವರ ಜೊತೆಗೆ ರಾಮಲಿಂಗೇಶ್ವರ, ವೀರಭದ್ರೇಶ್ವರ, ಬಿಸಿಲುಮಲ್ಲೇಶ್ವರ ದೇವರ ಒಟ್ಟು ಏಳು ಬಂಡಿಗಳು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತವೆ. ಏಳು ದಿನಗಳು ನಡೆಯುತ್ತಿದ್ದ ಜಾತ್ರೆ ಈಗ ಕೇವಲ ಐದು ದಿನ ಮಾತ್ರ ನಡೆಯುತ್ತಿದೆ.
ನಿವೃತ್ತ ಐಎಎಸ್. ಅಧಿಕಾರಿ ಸಿ.ಚಿಕ್ಕಣ್ಣ, ಕೊಂಡವಾಡಿ ಚಂದ್ರಶೇಖರ್, ತಮಿಳುನಾಡು ವೇಡಸಂದೂರ್ ಕ್ಷೇತ್ರದ ಶಾಸಕ ಗಾಂದಿರಾಜನ್, ಮಧುಗಿರಿ ಶಾಸಕ ಎಂ.ವಿ. ವೀರಭದ್ರಯ್ಯ, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಎಸ್.ಆರ್. ಗೌಡ, ಸುಧಾಕರ್ ಲಾಲ್, ಮುರಳಿಧರ ಹಾಲಪ್ಪ, ಎಲ್.ಸಿ. ನಾಗರಾಜು, ಪಾತರಾಜು, ಕೃಷ್ಣಮೂರ್ತಿ, ಶಿವರಾಂ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.