ADVERTISEMENT

ಕೋತಿತೋಪು–ಬೆಳಗುಂಬ ರಸ್ತೆ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 4:25 IST
Last Updated 28 ಮಾರ್ಚ್ 2021, 4:25 IST
ತುಮಕೂರು ನಗರದ ಬೆಳಗುಂಬ ರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಲಾಯಿತು
ತುಮಕೂರು ನಗರದ ಬೆಳಗುಂಬ ರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಲಾಯಿತು   

ತುಮಕೂರು: ನಗರದ ಬೆಳಗುಂಬ ರಸ್ತೆ ವಿಸ್ತರಣೆ ಕಾರ್ಯಕ್ಕೆ ಅಡ್ಡಿಯಾಗಿದ್ದ ಒತ್ತುವರಿಯನ್ನು ಶನಿವಾರ ಮಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು.

ಕೋತಿತೋಪು– ಬೆಳಗುಂಬ ರಸ್ತೆಯಲ್ಲಿ ಅನಧಿಕೃತವಾಗಿ ರಸ್ತೆ, ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳ
ಲಾಗಿತ್ತು. ಬೆಳ್ಳಬೆಳಿಗ್ಗೆ ಪಾಲಿಕೆ ಸಿಬ್ಬಂದಿ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ತೆರವು ಮಾಡಿದರು. ಪೆಟ್ಟಿಗೆ ಅಂಗಡಿಗಳು, ಕಾಂಪೌಂಡ್‍ಗಳನ್ನು ಜೆಸಿಬಿ ಯಂತ್ರಗಳ ಮೂಲಕ ನೆಲಸಮ ಮಾಡಲಾಯಿತು.

ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಬೆಳಗುಂಬ ರಸ್ತೆಯನ್ನೂ ವಿಸ್ತರಣೆ ಮಾಡಲಾಗುತ್ತಿದೆ. ತಮ್ಮಯ್ಯ ಆಸ್ಪತ್ರೆಯಿಂದ ರಾಷ್ಟ್ರೀಯ ಹೆದ್ದಾರಿವರೆಗೂ ಕೆಲಸ ವೇಗ ಪಡೆದುಕೊಂಡಿದೆ. ಆದರೆ ಕೋತಿತೋಪಿನಿಂದ ತಮ್ಮಯ್ಯ ಆಸ್ಪತ್ರೆವರೆಗೂ ಒತ್ತುವರಿಯಿಂದಾಗಿ ಕೆಲಸಕ್ಕೆ ಅಡ್ಡಿಯಾಗಿತ್ತು. ಈಗ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳು ಚುರುಕುಪಡೆದುಕೊಳ್ಳಲಿವೆ.

ADVERTISEMENT

ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕೆಲವರು ಮನೆ, ಕಾಂಪೌಂಡ್‍ ನಿರ್ಮಿಸಿಕೊಂಡಿದ್ದರು. ರಸ್ತೆ ಅಭಿವೃದ್ಧಿ ಉದ್ದೇಶದಿಂದ ಒತ್ತುವರಿ ತೆರವು ಮಾಡಲಾಯಿತು ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.

ಮಹಾತ್ಮಗಾಂಧಿ ಕ್ರೀಡಾಂಗಣ ರಸ್ತೆಯಿಂದ ತಮ್ಮಯ್ಯ ಆಸ್ಪತ್ರೆವರೆಗೆ ಒತ್ತುವರಿ ತೆರವುಗೊಳಿಸಲು ಕೆಲವು ಅಡೆತಡೆಗಳಿದ್ದವು. ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಈ ಅಡೆತಡೆ ನಿವಾರಿಸಿ ಒತ್ತುವರಿ ತೆರವು ನಡೆಸಲಾಗುತ್ತಿದೆ ಎಂದು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.