ಕುಣಿಗಲ್: ತಾಲ್ಲೂಕಿನ ಪಾಲಿನ ಹೇಮಾವತಿ ನೀರನ್ನು ಸಕಾಲಕ್ಕೆ ಹರಿಸಿ, ಅಚ್ಚುಕಟ್ಟು ಪ್ರದೇಶಗಳಿಗೂ ನೀರು ಹರಿಸುವಂತೆ ಜಿಲ್ಲಾಡಳಿತಕ್ಕೆ, ಜೆಡಿಎಸ್ ಯುವ ಘಟಕದ ಪ್ರದಾನ ಕಾರ್ಯದರ್ಶಿ ಬಿ.ಎನ್. ಜಗದೀಶ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ತಾಲ್ಲೂಕಿನಲ್ಲಿ ಶಾಸಕರು ಸೇರಿದಂತೆ ರಾಜಕಾರಣಿಗಳು ಹೇಮಾವತಿ ನೀರನ್ನು ದೊಡ್ಡಕೆರೆ ಮತ್ತು ಮಾರ್ಕೋನಹಳ್ಳಿ ಜಲಾಶಯಗಳಿಗೆ ಹರಿಸಿ ಗಂಗಾ ಪೂಜೆ ಮಾಡಲು ಮಾತ್ರ ಸಿಮೀತರಾಗಿದ್ದಾರೆ. ಕೆರೆಗಳಿಗೆ ನೀರು ತುಂಬಿಸಿದ ನಂತರ ಕುಡಿಯುವ ನೀರಿನ ಪ್ರಮಾಣವನ್ನು ಶೇಖರಿಸಿ, ಅಚ್ಚಕಟ್ಟು ಪ್ರದೇಶಗಳಿಗೂ ನೀರು ನೀಡಬೇಕು’ ಎಂದರು.
ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕುಣಿಗಲ್ ದೊಡ್ಡಕೆರೆ 1,300 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. 13 ವರ್ಷಗಳಿಂದ ಈ ಭಾಗಕ್ಕೆ ನೀರು ಹರಿದಿಲ್ಲ. ಕೊತ್ತಗೆರೆ 250, ಚಿಕ್ಕಕೆರೆ 150, ಕಂಟನಹಳ್ಳಿ 180, ಬೇಗೂರು 250, ಸಂಕೇನಪುರ 220 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಪ್ರಸಕ್ತ ವರ್ಷ ಪ್ರಾರಂಭದ ದಿನಗಳಲ್ಲಿಯೇ ತಾಲ್ಲೂಕಿಗೆ ನೀರು ಹರಿಯುತ್ತಿದೆ. ಹಾಗಾಗಿ ಕಳೆದ ಹತ್ತಾರು ವರ್ಷಗಳಿಂದ ಸಂಗ್ರಹವಾಗಿರುವ ದೊಡ್ಡಕೆರೆ ನೀರನ್ನು ಅಚ್ಚುಕಟ್ಟು ಪ್ರದೇಶಕ್ಕೆ ಹರಿಸಿ, ಹೊಸದಾಗಿ ಬರುತ್ತಿರುವ ನೀರನ್ನು ಸಂಗ್ರಹಿಸಬೇಕು ಎಂದು ಮನವಿ ಮಾಡಿದರು.
ಜಿಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಲ್. ಹರೀಶ್, ಮುಖಂಡರಾದ ಕೃಷ್ಣಮೂರ್ತಿ, ಎಡೆಯೂರು ದೀಪು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.