
ಬಂಧನ
ಕುಣಿಗಲ್: ತಾಲ್ಲೂಕಿನ ದಾಸನಪುರದ ಗ್ರಾಮದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿ, ಮಹಿಳೆಯರ ಚಲನವಲನ, ಹಾವಭಾವದ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಆರೋಪದ ಮೇರೆಗೆ ದಾಸನಪುರದ ವರದರಾಜು ಎಂಬುವರನ್ನು ಕುಣಿಗಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಸಾರ್ವಜನಿಕ ಸ್ಥಳ, ಪ್ರಯಾಣಿಕರ ತಂಗುದಾಣ, ರಸ್ತೆ ಬದಿ ಸೇರಿ ಗ್ರಾಮದ ವಿವಿಧೆಡೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿ, ಮೊಬೈಲ್ಗೆ ಸಂಪರ್ಕ ಪಡೆದಿದ್ದಾರೆ. ಮಹಿಳೆಯರ ಚಲನವಲನ, ಹಾವಭಾವ, ಬಯಲಲ್ಲಿ ಶೌಚಕ್ಕೆ ತೆರಳುವಾಗ ವಿಡಿಯೊ ಮಾಡಿದ್ದಾರೆ. ಎಲ್ಲ ವಿಡಿಯೊಗಳನ್ನು ಸ್ನೇಹಿತರ ಜತೆಗೆ ಹಂಚಿಕೊಂಡಿದ್ದಾರೆ. ಇದರಿಂದ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ದಾಸನಪುರದ ಪವಿತ್ರಾ ಶುಕ್ರವಾರ ರಾತ್ರಿ 40ಕ್ಕೂ ಹೆಚ್ಚು ಮಹಿಳೆಯರ ಜತೆಗೆ ಕುಣಿಗಲ್ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಿದ್ದರು.
‘ವರದರಾಜು ಸಂಘಟನೆಯೊಂದರ ಹೆಸರು ಹೇಳಿ ಎಲ್ಲರಿಗೂ ಬೆದರಿಕೆ ಹಾಕುತ್ತಿದ್ದಾರೆ. ಮಾನ, ಮರ್ಯಾದೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಠಾಣೆಗೆ ದೂರು ನೀಡಿದ್ದೇವೆ. ಸಿ.ಸಿ ಟಿ.ವಿ ಕ್ಯಾಮೆರಾ ತೆರವುಗೊಳಿಸಬೇಕು. ಅದರಲ್ಲಿ ಸೆರೆಯಾಗಿರುವ ಎಲ್ಲ ದೃಶ್ಯಗಳನ್ನು ಡಿಲೀಡ್ ಮಾಡಬೇಕು. ಮಹಿಳೆಯರು ಮತ್ತು ಮಕ್ಕಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು’ ಎಂದು ಪವಿತ್ರಾ ಮನವಿ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವರದರಾಜು ಅವರನ್ನು ಶನಿವಾರ ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.