ಶಿರಾ: ಮಾಲೀಕರಿಂದ ಕಾರ್ಮಿಕರ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಶೋಷಣೆ ವಿರುದ್ಧ ನಡೆಸಿದ ಹೋರಾಟದಿಂದಾಗಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಯಿತು ಎಂದು ನಿವೃತ್ತ ಐಜಿಪಿ ಅರ್ಕೇಶ್ ಹೇಳಿದರು.
ನಗರದ ಲೋಹಿಯಾ ಸಮತಾ ವಿದ್ಯಾಲಯದ ಕಿಶನ್ ಪಟ್ನಾಯಕ್ ಸಭಾಂಗಣದಲ್ಲಿ ಗುರುವಾರ ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ, ರೈತ ಸಂಘ ಮತ್ತು ಹಸಿರು ಸೇನೆ, ಮಾನವ ಬಂಧುತ್ವ ವೇದಿಕೆಯಿಂದ ನಡೆದ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.
ಅಮೆರಿಕದಲ್ಲಿ ಮೊದಲು ಕಾರ್ಮಿಕರ ಹೋರಾಟ ಪ್ರಾರಂಭವಾಗಿ ನಂತರ ಇತರೆಡೆಗೆ ವ್ಯಾಪಿಸಿತು. ಕಾರ್ಮಿಕರಿಗೆ ಹಕ್ಕುಗಳು ದೊರೆತರೂ ಬಂಡವಾಳಶಾಹಿಗಳು ಈಗಲೂ ಸಹ ಅವರ ಮೇಲೆ ಶೋಷಣೆ ನಡೆಸುತ್ತಿರುವುದು ವಿಷಾದನೀಯ ಎಂದರು.
ವಕೀಲ ರವಿವರ್ಮಕುಮಾರ್ ಮಾತನಾಡಿ, ಅಂಬೇಡ್ಕರ್ ದೇಶಕ್ಕೆ ಉತ್ತಮ ಸಂವಿಧಾನ ನೀಡಿದರು. ಜಾಗತಿಕ ಮಟ್ಟದಲ್ಲಿ ಪ್ರೊ.ನಂಜುಂಡಸ್ವಾಮಿ ಅವರ ಮಾರ್ಗದರ್ಶನದಲ್ಲಿ ರೈತರನ್ನು ಸಂಘಟಿಸಿ ನಡೆಸಿದ ಹೋರಾಟದಿಂದಾಗಿ ರೂಪಿಸಿದ ಕರಡಿಗೆ ಮಾನ್ಯತೆ ನೀಡಿ 2018ರಲ್ಲಿ ವಿಶ್ವಸಂಸ್ಥೆಯು ರೈತರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಇತರ ಜನರ ಹಕ್ಕುಗಳ ಕುರಿತು ಘೋಷಣೆ ಮಾಡಿತು. ಇದಕ್ಕೆ ಕೆಲವು ದೇಶಗಳು ಮಾನ್ಯತೆ ನೀಡಿದ್ದು, ನಮ್ಮಲ್ಲಿ ಸಹ ಮಾನ್ಯತೆ ದೊರೆಯಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಮಹೇಶ್, ರೈತ ಸಂಘದ ಅಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ, ಚಿಂತಕ ಕೆ.ದೊರೈರಾಜು, ನ್ಯಾಯವಾದಿ ಅಶ್ವಿನಿ ಓಬಳೇಶ್, ಮಾನವ ಹಕ್ಕುಗಳ ಹೋರಾಟಗಾರ್ತಿ ಮಾರ್ಗರೇಟ್ ಸಂಪತ್, ಮಲ್ಲಿಕಾರ್ಜುನ್, ರಾಮಣ್ಣ, ಡಾ.ಮಂಜುನಾಥ್, ರಂಗನಾಥ ಗೌಡ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯಾರಾದ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.