ADVERTISEMENT

ರ‍್ಯಾಸ್ಕಲ್...ಜಾಡಿಸಿ ಒದ್ದರೆ...: ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ತರಾಟೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 11:12 IST
Last Updated 7 ಜನವರಿ 2021, 11:12 IST
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ   

ತುಮಕೂರು: ‘ರ‍್ಯಾಸ್ಕಲ್... ಜಾಡಿಸಿ ಒದ್ದರೆ ನೋಡು... ಕತ್ತೆ ಕಾಯಲು ಇಲ್ಲಿಗೆ ಬಂದಿದ್ದೀರಾ... ನಿಮ್ಮಿಂದ ಜಿಲ್ಲೆಗೆ ಗ್ರಹಣ ಹಿಡಿದಿದೆ... ಅಭಿವೃದ್ಧಿ ಹಾಳಾಗಿ ಹೋಯಿತು... ಎಂಜಿನಿಯರುಗಳು ಜಿಲ್ಲೆ ನಿರ್ನಾಮ ಮಾಡಲು ಸೇರಿಕೊಂಡಿದ್ದಾರೆ’....

–ಹೀಗೆ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ನಡೆದ ಕೆಡಿಪಿ, ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಎಂದೂ ಅಧಿಕಾರಿಗಳನ್ನು ಗದರಿಸಿರಲಿಲ್ಲ. ಜೋರಾಗಿಯೂ ಮಾತನಾಡಿರಲಿಲ್ಲ. ಆದರೆ ‘ಜಿಲ್ಲೆಯ ಆಡಳಿತ ಯಂತ್ರ ಹಳಿತಪ್ಪಿದೆ, ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ, ಅಭಿವೃದ್ಧಿ ಕುಂಠಿತಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ’ ಎಂಬ ಆರೋಪ, ಟೀಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದವು. ಇದರಿಂದ ಸಿಟ್ಟಿಗೆದ್ದ ಸಚಿವರು ಸಭೆಯಲ್ಲೇ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

ADVERTISEMENT

ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ್ ಬಾಬು ಅವರಿಂದ ಪ್ರಗತಿಯ ಮಾಹಿತಿ ಕೇಳಿದರು. ‘ಆರ್ಥಿಕ ವರ್ಷದ ಅಂತ್ಯಕ್ಕೆ ಬಂದಿದ್ದರೂ ಇನ್ನೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಇದೇ ರೀತಿಯಾದರೆ ಬಂದಿರುವ ಹಣ ಸರ್ಕಾರಕ್ಕೆ ವಾಪಾಸಗಲಿದೆ’ ಎಂದು ಸಿಟ್ಟುಗೊಂಡರು. ‘ನಿಮ್ಮಂತಹವರಿಂದ ಏನು ಕೆಲಸ ಮಾಡಿಸುವುದು’ ಎಂದು ಚುಚ್ಚಿದರು.

ನಂತರ ತಾಲ್ಲೂಕುಗಳ ಸಹಾಯಕ ಕಾರ್ಯನಿರ್ವಾಹಕ ಎಂನಿಯರುಗಳಿಂದ ಮಾಹಿತಿ ಪಡೆದುಕೊಂಡರು. ಗುಬ್ಬಿ ಎಂಜಿನಿಯರ್ ವಿವರ ನೀಡುವ ಸಮಯದಲ್ಲಿ ಈವರೆಗೂ ಯಾವುದೇ ಕೆಲಸಕ್ಕೂ ಕಾರ್ಯಾದೇಶ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆ ಸಮಯದಲ್ಲಿ ಒಟ್ಟಾರೆಯಾಗಿ ಜಿ.ಪಂ ಎಂಜಿನಿಯರುಗಳನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.