ಗುಬ್ಬಿ: ‘ಸದ್ಯದ ಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯು ಚರ್ಚಿಸುವ ವಿಷಯವೇ ಅಲ್ಲ. ಯಾರೋ ಎಲ್ಲಿಯೋ ಕುಳಿತು ಮಾತನಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ತಾಲ್ಲೂಕಿನ ನಿಟ್ಟೂರು ವಿನಾಯಕ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಕೋವಿಡ್ ಅರೈಕೆ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
‘ಮುಖ್ಯಮಂತ್ರಿ ಬದಲಾವಣೆ ಮಾಡುವ ಯಾವುದೇ ವಿಚಾರವನ್ನು ಪಕ್ಷದಲ್ಲಿ ಚರ್ಚಿಸಿಲ್ಲ. ಈಗಲೂ ಬಿ.ಎಸ್. ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿ. ಇದರಲ್ಲಿ ಬೇರೆ ಮಾತಿಲ್ಲ’ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಕೆಂಪು ವಲಯದಿಂದ ಹಳದಿ ವಲಯಕ್ಕೆ ಜಿಲ್ಲೆ ಬಂದಿದ್ದು, ಜಿಲ್ಲೆಯಲ್ಲಿ ಈಗಾಗಲೇ ಅಗತ್ಯ ಇರುವ ಕಡೆ ಕೋವಿಡ್ ಅರೈಕೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಹಳದಿ ವಲಯಕ್ಕೆ: ಸೋಂಕಿತರನ್ನು ಅರೈಕೆ ಕೇಂದ್ರಕ್ಕೆ ದಾಖಲಿಸುತ್ತಿರುವುದರಿಂದ ಸಮುದಾಯಕ್ಕೆ ರೋಗ ಹರಡುತ್ತಿರುವುದು ಕಡಿಮೆಯಾಗಿದ ಎಂದು ಹೇಳಿದರು.
ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನ ಎಲ್ಲ ಭಾಗದಲ್ಲಿಯು ಕೋವಿಡ್ ಕಾರ್ಯಪಡೆ ರಚಸಿ ಗ್ರಾಮೀಣ ಮಟ್ಟದಲ್ಲಿ ಸೋಂಕು ತಡೆಗೆ ಯತ್ನಿಸಲಾಗುತ್ತಿದೆ. ಸದ್ಯ ನಾಲ್ಕು ಕೋವಿಡ್ ಆರೈಕೆ ಕೇಂದ್ರ ಇರುವುದರಿಂದ ಚಿಕಿತ್ಸೆಗೆ ಸಮಸ್ಯೆ ಇ್ಲಲ ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಡಾ.ನವ್ಯಬಾಬು, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎನ್.ಸಿ. ಪ್ರಕಾಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಜಿ.ಎನ್.ಬೆಟ್ಟಸ್ವಾಮಿ, ಚಂದ್ರಶೇಕರ್ ಬಾಬು, ಎಸ್.ಡಿ. ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ, ಡಿಎಚ್ಒ ನಾಗೇಂದ್ರಪ್ಪ, ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್, ಟಿಎಚ್ಒ ಬಿಂದುಮಾಧವ, ಡಿವೈಎಸ್ಪಿ ಕುಮಾರಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.